ಕಾರ್ಕಳ, ಆ. 06 (DaijiworldNews/SM): ಹಿಂದುತ್ವ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಂದರ್ಭದಲ್ಲೂ ರಾಜಿ ಇಲ್ಲ. ಸಚಿವ ಸ್ಥಾನ, ಶಾಸಕ ಸ್ಥಾನ, ಹಿಂದುತ್ವ ಎನ್ನುವ ಆಯ್ಕೆ ಬಂದ್ರೆ ನನ್ನ ಆಯ್ಕೆ ಹಿಂದುತ್ವ ಎಂದು ಬೆಳ್ಮಣ್ ನಲ್ಲಿ ನೂತನ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕಾರ್ಕಳ ಕ್ಷೇತ್ರದ ಜನ ಮೂರು ಬಾರಿ ನನ್ನನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಇವತ್ತು ನಾನು ಸಚಿವನಾಗಲು ಸಾಧ್ಯವಾಗಿದೆ. ಈ ಕಾರಣದಿಂದ ಇಡೀ ಕಾರ್ಕಳದ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪಕ್ಷ ನನಗೆ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದೆ. ಮುಖ್ಯಮಂತ್ರಿಗಳು ಹಾಗೂ ಪಕ್ಷ ದೊಡ್ಡ ನಿರೀಕ್ಷೆಯನ್ನಿಟ್ಟು ನನಗೆ ಜವಾಬ್ದಾರಿ ನೀಡಿದೆ. ಆ ಎಲ್ಲಾ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ನಡೆಸುತ್ತೇನೆ. ನನ್ನ ಇಷ್ಟದ ಖಾತೆ ಎಂದು ಯಾವುದೂ ಇಲ್ಲ, ಸಿಎಂ ನೀಡಿದ ಜವಾಬ್ದಾರಿ ನಿರ್ವಹಿಸುವೆ ಎಂಬುವುದಾಗಿ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.