ಕಾಸರಗೋಡು, ಆ 06 (DaijiworldNews/PY): ಉಪ್ಪಳದ ಹೇರೂರು ಬದಿಯಾರು ನಿವಾಸಿ ಮಧುಸೂದನ ಶೆಟ್ಟಿ ಸಮುದ್ರ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅವರ ಬಿಡುಗಡೆಗಾಗಿ ಪತ್ನಿ ಇಂದಿರಾವತಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮಧುಸೂದನ ಶೆಟ್ಟಿ ಅವರು ಎರಡೂವರೆ ವರ್ಷಗಳಿಂದ ಮಲೇಷ್ಯಾ ನೆಗೇರಿ ಸಿಂಬ್ಲಿ ಲಾನ್ನ ಮಿಲಾಲ್ ಅರೇಕಾ ಕಮರ್ಶಿಯಲ್ ಮಾಲ್ನ ಮೂಸಾನ್ ಎಂಟರ್ಪ್ರೈಸಸ್ನಲ್ಲಿ ಅಡುಗೆಯಾಳಾಗಿ ಕೆಲಸ ಮಾಡುತ್ತಿದ್ದರು.
ಮಧುಸೂದನ ಶೆಟ್ಟಿ ಅವರು ಫೆ.27ರಂದು ಸಮುದ್ರ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭ ಬಾಲಕಿಯೊಬ್ಬಳು ಸಮುದ್ರದ ಅಲೆಗೆ ಸಿಕ್ಕಿ ಒದ್ದಾಡುತ್ತಿದ್ದಳು. ಇದನ್ನು ಕಂಡ ಮಧುಸೂದನ ಅವರು ಸಮುದ್ರಕ್ಕೆ ಧುಮುಕಿ ಬಾಲಕಿಯನ್ನು ರಕ್ಷಿಸಿದ್ದರು. ನಂತರ ಬಾಲಕಿಯ ಬಟ್ಟೆಯಲ್ಲಿ ಅಂಟಿದ್ದ ಮರಳನ್ನು ತೆಗೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಬಾಲಕಿಯ ಪೋಷಕರು ಮಧುಸೂದನ ಬಾಲಕಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ, ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು.
ಈ ನಡುವೆ ಬಾಲಕಿಯ ಪೋಷಕರಿಗೆ ನಿಜ ವಿಚಾರ ಅರಿವಾಗಿದ್ದು, ನಮ್ಮಿಂದ ತಪ್ಪಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು ಕೂಡಾ ಕಾನೂನು ಕ್ರಮದಿಂದ ಹಿಂದೆ ಸರಿಯಲಿಲ್ಲ. ಮಧುಸೂದನ ಶೆಟ್ಟಿ ಅವರ ಬಿಡುಗಡೆಗಾಗಿ ಮಲೇಷ್ಯಾದ ಮಲಯಾಳಿಗರ ಸಂಘಟನೆಗಳು ಹಾಗೂ ಹೊಟೇಲ್ ಮಾಲಕರೂ ಯತ್ನಿಸಿದರಊ ಕೂಡಾ ಯಾವುದೇ ಪ್ರಯೋಜನವಾಗಲಿಲ್ಲ.
ಮಧುಸೂದನ ಶೆಟ್ಟಿ ಅವರ ಸಹೋದ್ಯೋಗಿಯಾಗಿರುವ ತೃಶೂರ್ ನಿವಾಸಿ ಜೂನ್ 11ರಂದು ಪತ್ನಿ ಇಂದಿರಾವತಿ ಅವರಿಗೆ ಮಧುಸೂದನ ಜೈಲಿನಲ್ಲಿರುವ ಬಗ್ಗೆ ತಿಳಿಸಿದ್ದರು. ಈ ವೇಳೆ ಕೂಡಲೇ ಅವರು ತಮ್ಮ ಪತಿಯ ಬಿಡುಗಡೆಗಾಗಿ ಬಿಜೆಪಿ ನೇತಾರರ ಮೂಲಕ ಕೇಂದ್ರ ವಿದೇಶಾಂಗ ಖಾತೆಯ ಸಹಾಯಕ ಸಚಿವ ವಿ. ಮುರಳೀಧರನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.