ಉಳ್ಳಾಲ, ಆ 06 (DaijiworldNews/PY): ಐಸಿಸ್ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಉಳ್ಳಾಲದ ಮಾಸ್ತಿಕಟ್ಟೆಯ ಅಮ್ಮರ್ನನ್ನು ಬಂಧಿಸಿದ ಎನ್ಐಎ ಅಧಿಕಾರಿಗಳು ಓರ್ವ ಮಹಿಳೆಯ ಮೇಲೂ ಸಂಶಯ ಹೊಂದಿದ್ದು, ಆಕೆಯ ಮೇಲೆ ನಿಗಾ ಇರಿಸಿದ್ದಾರೆ.
ಐಸಿಸ್ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಶಂಕೆಯ ಮೇರೆಗೆ ಉಳ್ಳಾಲದ ಮಾಜಿ ಶಾಸಕ ದಿ.ಇದಿನಬ್ಬ ಅವರ ಮೊಮ್ಮಗ ಅಮ್ಮರ್ ಅಬ್ದುಲ್ ರೆಹಮಾನ್ ಎನ್ಐಎ ಬುಧವಾರ ಬಂಧಿಸಿತ್ತು. ಇದಿನಬ್ಬ ಅವರ ಇನ್ನೋರ್ವ ಮೊಮ್ಮಗನ ಮತಾಂತರಿತ ಪತ್ನಿಯನ್ನು ಗುರುವಾರ ವಿಚಾರಣೆಗೆ ಒಳಪಡಿಸಿದೆ.
ಐಸಿಸ್ ಪರ ಒಲವು ಹಾಗೂ ಹಣ ಸಂಗ್ರಹದ ಆರೋಪ ಆಕೆಯ ಮೇಲಿದೆ. ಕ್ರೋನಿಕಲ್ ಫೌಂಡೇಶನ್ ಎನ್ನುವ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈಕೆ ಐಸಿಸ್ ಪರ ಅಜೆಂಡಾ ಹರಡುತ್ತಿದ್ದ ಆರೋಪ ಕೇಳಿ ಬಂದಿದೆ.
ಈಕೆ ವಿರಾಜಪೇಟೆ ಮೂಲದವಳಾಗಿದ್ದು, ಈಕೆ ಮೂಲತಃ ಹಿಂದೂ ಧರ್ಮಕ್ಕೆ ಸೇರಿದವಳು. ಆರು ವರ್ಷಗಳ ಹಿಂದೆ ಈಕೆ ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಬಿಡಿಎಸ್ ಕಲಿಯುತ್ತಿದ್ದಳು. ಈ ವೇಳೆ ಬಿ.ಎಂ ಬಾಷಾ ಅವರ ಮೂರನೇ ಮಗನ ಪರಿಚಯವಾಗಿ ಇಸ್ಲಾಂಗೆ ಮತಾಂತರಗೊಂಡು ವಿವಾಹವಾಗಿದ್ದಳು. ಅಲ್ಲದೇ, ಆಕೆ ತನ್ನ ಹೆಸರನ್ನು ಕೂಡಾ ಬದಲಾಯಿಸಿಕೊಂಡಿದ್ದಳು. ಇನ್ಸ್ಟಾಗ್ರಾಂ ಹಾಗೂ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಐಸಿಸ್ ಜೊತೆ ಈಕೆ ನಿರಂತರ ಸಂಪರ್ಕ ಹೊಂದಿದ್ದಳು. ಅಲ್ಲದೇ, ಮನೆಯಲ್ಲೇ ಇದ್ದ ಬಿ.ಎಂ ಬಾಷಾರ ಕಿರಿಯ ಮಗ ಅಮ್ಮರ್ ಅಬ್ದುಲ್ ಜೊತೆ ಸೇರಿಕೊಂಡು ಐಸಿಸ್ ಪರ ಒಲವು ವ್ಯಕ್ತಪಡಿಸಿದ್ದಳು ಎನ್ನುವ ಆರೋಪ ಕೇಳಿ ಬಂದಿದ್ದು, ಹಾಗಾಗಿ ಆಕೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೇರಳ ಮೂಲ್ ಮಹಮ್ಮದ್ ಅಮೀನ್ ಎಂಬಾತನ ತಂಡದ ಜೊತೆ ಬಂಧಿತ ಅಮ್ಮರ್ ಅಬ್ದುಲ್ ರಹ್ಮಾನ್ ನಿರಂತರ ಸಂಪರ್ಕ ಹೊಂದಿದ್ದ ಎನ್ನುವುದನ್ನು ಎನ್ಐಎ ಪತ್ತೆ ಮಾಡಿದೆ. ಆತ ಹಾಗೂ ಆತನ ಸಹೋದರನ ಪತ್ನಿ ಕಾಶ್ಮೀರ, ಕರ್ನಾಟಕ ಹಾಗೂ ಕೇರಳದ ಯುವಕರನ್ನು ಐಸಿಸ್ಗೆ ಸೆಳೆಯಲು ಯತ್ನಿಸುತ್ತಿರುವ ವಿಚಾರ ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಆಕೆಯನ್ನು ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಅಮ್ಮರ್ ಅಬ್ದುಲ್ ರಹ್ಮಾನ್ ಬಂಧನವನ್ನು ಖಚಿತಪಡಿಸಿದ್ದರೂ ಕೂಡಾ ಮಹಿಳೆಯನ್ನು ವಶಕ್ಕೆ ಪಡೆದಿರುವ ವಿಚಾರದ ಬಗ್ಗೆ ಎನ್ಐಎ ಇನ್ನೂ ಅಧಿಕೃತವಾದ ಮಾಹಿತಿ ನೀಡಿಲ್ಲ.