ಸುಬ್ರಹ್ಮಣ್ಯ, ಆ 06 (DaijiworldNews/PY): ಎಸ್. ಅಂಗಾರ ಅವರು ಎರಡನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭ ಸಚಿವರು ಗೋಪುರದ ಬಳಿಯಿಂದಲೇ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಸಚಿವರಿಗೆ ಹಾರ ಹಾಕಿ, ಶಾಲು ಹೊದಿಸಿ ದೇವರ ಪ್ರಸಾದ ನೀಡಿದರು. ನಂತರ ಗ್ರಾ.ಪಂ ಸದಸ್ಯರು ಹಾಗೂ ಮುಖಂಡರು ಸಚಿವರನ್ನು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಅಂಗಾರ, "ನನಗೆ ಪಕ್ಷದ ಹಾಗೂ ಸಂಘಟನೆಯ ಹಿರಿಯರು ಎರಡನೇ ಬಾರಿಗೆ ಅವಕಾಶ ನೀಡಿದ್ದಾರೆ. ಅವರು ನೀಡಿರುವ ಜವಾಬ್ದಾರಿಯನ್ನು ಅಪೇಕ್ಷೆಗೆ ತಕ್ಕಂತೆ ನಿರ್ವಹಿಸುತ್ತೇನೆ. ಹಿರಿಯರು ನನ್ನ ಮೇಲೆ ಇರಿಸಿದ ವಿಶ್ವಾಸ ಹಾಗೂ ಪ್ರೀತಿಗೆ ತಕ್ಕದಾಗಿ ನಾನು ಕರ್ತವ್ಯ ನಿರ್ವಹಿಸುತ್ತೇನೆ. ಜನತೆಯ ಅಭಿವೃದ್ದಿಗೆ ಪೂರಕವಾಗಿ ಶ್ರಮವಹಿಸಿ ದುಡಿಯುತ್ತೇನೆ" ಎಂದಿದ್ದಾರೆ.
ಈ ಸಂದರ್ಭ ದೇವಳದ ಎಇಒ ಪುಷ್ಪಲತಾ ರಾವ್, ಪ್ರಮುಖರಾದ ಭಾರತಿ ದಿನೇಶ್, ಚಿದಾನಂದ ಕಂದಡ್ಕ, ಹರೀಶ್ ಕಂಜಿಪಿಲಿ, ವೆಂಕಟೇಶ್ ಎಚ್.ಎಲ್, ಶಿವರಾಮ ನೆಕ್ರಾಜೆ, ವೆಂಕಟೇಶ್ ಎಚ್.ಎಲ್, ದಿನೇಶ್ ಸಂಪ್ಯಾಡಿ, ಅಚ್ಚುತ್ತ ಗೌಡ, ಗಿರಿಧರ್ ಸ್ಕಂಧ, ರಾಜೇಶ್ ಎನ್.ಎಸ್, ದಿವ್ಯಾ, ಯಶೋದಾ, ಕೃಷ್ಣ, ಸ್ಥಳೀಯರು ಹಾಗೂ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.