ಮಂಗಳೂರು, ಆ 06 (DaijiworldNews/MS): ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಶದಲ್ಲಿ ಅಕ್ರಮವಾಗಿ ನೆಲೆಸಿ ಬಂಧಿಸಲ್ಪಟ್ಟ 38 ಶ್ರೀಲಂಕಾ ಪ್ರಜೆಗಳನ್ನು ಬುಧವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.
ಮಂಗಳೂರಿನ ವಿವಿಧ ಕಡೆಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಅಕ್ರಮವಾಗಿ ನೆಲೆಸಿದ್ದ ಆರೋಪ ಮೇಲೆ೩೮ ಮಂದಿ ಶ್ರೀಲಂಕಾ ಪ್ರಜೆಗಳನ್ನು ಜೂ.21 ರಂದು ಪೊಲೀಸರು ಬಂಧಿಸಿದ್ದರು.
ಇವರೆಲ್ಲಾ ಮಾರ್ಚ್ 17 ರಂದು ಶ್ರೀಲಂಕಾದಿಂದ ಹೊರಟು ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿ, ತೂತುಕುಡಿಯನ್ನು ತಲುಪಿದ ನಂತರ, ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು. ಆದರೆ ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಹೆಚ್ಚಿನ ತಪಾಸಣೆಯಿಂದಾಗಿ ಅವರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ತೆರಳಲು ಏಜೆಂಟರು ಹೇಳಿದ್ದರು. ತಮಿಳುನಾಡಿನಿಂದ ಅವರು ಖಾಸಗಿ ಬಸ್ಗಳಲ್ಲಿ ಬೆಂಗಳೂರಿಗೆ ಸಣ್ಣ ಗುಂಪುಗಳಲ್ಲಿ ಪ್ರಯಾಣಿಸಿ , ಬೆಂಗಳೂರಿನಿಂದ ಅವರು ಮಂಗಳೂರು ತಲುಪಿದ್ದರು. ಈ ವೇಳೆ ಇಲ್ಲಿ ಪೊಲೀಸರು ಬಂಧಿಸಿದ್ದರು. ಕಳೆದ 7 ವಾರಗಳಿಂದ ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಶ್ರೀಲಂಕಾದ ನಿಷೇಧಿತ ಸಂಘಟನೆ ಎಲ್ ಟಿ ಟಿ ಇ ಜತೆ ನಂಟು ಹೊಂದಿದ ಶಂಕೆಯ ಮೇರೆಗೆ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಲಾಗಿತ್ತು.
ಬಂಧಿತ 38 ಮಂದಿಯ ಪೈಕಿ ಓರ್ವನಿಗೆ ನಿಷೇಧಿತ ಎಲ್'ಟಿಟಿಇ ಜತೆ ನಂಟು ಇರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. 2005 ರಲ್ಲಿ ಎಲ್'ಟಿಟಿಇ ಗೆ ಶಸ್ತ್ರಾಸ್ತ ಪೂರೈಸಿದವರಲ್ಲಿ ಆತ ಇದ್ದುದು ಗೊತ್ತಾಗಿದೆ. ಈತನಿಗೆ ತಮಿಳುನಾಡಿನಲ್ಲಿ ಬಂಧಿತ ಎಲ್ ಟಿ ಟಿಇ ಬೆಂಬಲಿಗ ದಿನಕರ್ ಜತೆ ಸಂಪರ್ಕ ಇತ್ತು ಎಂದು ತಿಳಿದುಬಂದಿದೆ. ರಾಷ್ಟ್ರೀಯ ಭದ್ರತೆಯ ವಿಚಾರವಾಗಿರುವುದರಿಂದ ಬೆಂಗಳೂರಿನಲ್ಲಿಯೇ ವಿಸ್ತೃತ ತನಿಖೆ ನಡೆಸಲು ಎನ್ ಐ ಎ ನಿರ್ಧರಿಸಿದೆ ಎಂದು ತಿಳಿದುಬಂದಿದೆ.