ಕಾರ್ಕಳ, ಆ 05 (DaijiworldNews/PY): "ರೋಗ ನಿರೋಧಕ ಶಕ್ತಿ ವೃದ್ಧಿಗೆ ತಾಯಿಯ ಎದೆ ಹಾಲು ಅಮೃತವಾಗಿದೆ. ಆಗ ತಾನೇ ಹುಟ್ಟಿದ ಮಗುವಿಗೆ ಒಂದು ಗಂಟೆಯೊಳಗಾಗಿ ತಾಯಿ ಸ್ತನ್ಯಪಾನ ಮಾಡಿಸಲೇ ಬೇಕು. ಗಿಣ್ಣು ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಅಂಶ ಹೆಚ್ಚಾಗಿರುತ್ತದೆ. ಮಗುವಿಗೆ ಆರು ತಿಂಗಳ ಕಾಲ ಎದೆ ಹಾಲನ್ನು ಹೊರತುಪಡಿಸಿ ಇತರ ಯಾವುದೇ ನೀರಿನ ಅಂಶವನ್ನು ಕುಡಿಸಬಾರದು" ಎಂದು ತಾಲೂಕು ಸರಕಾರಿ ಆಸ್ಪತ್ರೆಯ ಸ್ತ್ರೀ ತಜ್ಞೆ ಡಾ. ಸೌಜನ್ಯ ಬಿ.ಎಸ್, ಸಲಹೆ ನೀಡಿದರು.
ಕಾರ್ಕಳ ಲಯನ್ಸ್ ಕ್ಲಬ್ ವತಿಯಿಂದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ ಸ್ತನ್ಯಪಾನದ ಮಹತ್ವ ಕಾರ್ಯಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಮಾತನಾಡಿ, "ಎದೆಹಾಲಿನ ಮಹತ್ವದ ಜನಜಾಗೃತಿಯನ್ನು ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸುವುದು ಲಯನ್ಸ್ ಕ್ಲಬ್ನ ಮೂಲ ಉದ್ದೇಶವಾಗಿದೆ. ಜನ್ಮ ನೀಡಿದ ಮಗುವಿಗೆ ಎದೆಹಾಲು ನೀಡುವುದೇ ತಾಯಿಯ ಮೊದಲ ಕೊಡುಗೆಯಾಗಿದೆ" ಎಂದರು.
ಸ್ತ್ರೀ ತಜ್ಞೆ ಡಾ. ನಿಶಾ ಮಾತನಾಡಿ,"ಎದೆಹಾಲಿನಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿದೆ. ಆ ಮೂಲಕ ಮಗುವಿನಲ್ಲಿ ಕೆಮ್ಮು, ಜ್ವರ, ನ್ಯುಮೋನಿಯಾ, ವಾಂತಿ-ಭೇದಿ,ಅಲರ್ಜಿ ಮೊದಲಾದ ಮಕ್ಕಳನ್ನು ಕಾಡುವ ರೋಗಗಳಿಂದ ಮುಕ್ತಿನೀಡಬಹುದಾಗಿದೆ. ತಾಯಿಯ ಪ್ರೀತಿಯ ಅಪ್ಪುಗೆ, ತಾಯಿಯ ಶರೀರದ ಬೆಚ್ಚಗೆ ಮಗುವಿಗೆ ಅಗತ್ಯವಾಗಿದೆ. ಎದೆಯಾಲು ಮಗುವಿನ ಮೆದುಳಿನ ಬೆಳವಣಿಗೆಗೂ ಪೂರಕವಾಗಿರುತ್ತದೆ" ಎಂದರು.
ಲಯನ್ಸ್ ಕ್ಲಬ್ನ ಮಿಥುನ್ ಹೆಗ್ಡೆ, ಡಾ. ಅನಂತ ಕಾಮತ್, ಡಾ. ಶಾಂಶಕ, ಲಯನ್ಸ್ ಕ್ಲಬ್ನ ಸುಭಾಸ್ ಸುವರ್ಣ ಉಪಸ್ಥಿತರಿದ್ದು ಶುಭಾ ಹಾರೈಸಿದರು.
ಸ್ತ್ರೀ ತಜ್ಞೆಯರಾದ ಡಾ. ಸೌಜನ್ಯ ಬಿ.ಎಸ್,ಡಾ. ನಿಶಾ, ಡಾ. ಅನಂತ ಕಾಮತ್, ಡಾ. ಶಾಂಶಕ ಮೊದಲಾದವರು ಉಪಸ್ಥಿತರಿದ್ದರು.