ಮಂಗಳೂರು, ಆ 05 (DaijiworldNews/MS): ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಮಗುಚಿ ಬಿದ್ದ ಪರಿಣಾಮ ಓರ್ವ ಕಾರ್ಮಿಕ ನಾಪತ್ತೆಯಾಗಿರುವ ಘಟನೆ ಉಳ್ಳಾಲ ತೀರದಲ್ಲಿ ಆ.05 ರ ಗುರುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಮೀನುಗಾರಿಕಾ ಋತು ಆ.1ರಿಂದ ಆರಂಭವಾದ ಹಿನ್ನಲೆಯಲ್ಲಿ ಸುಮಾರು ಐದು ತಿಂಗಳ ನಂತರ ಇಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ಧಕ್ಕೆಯಿಂದ ಮೀನುಗಾರಿಕೆಗೆ ಹೊರಟ ಆಳಸಮುದ್ರ ದೋಣಿಯು ಈ ಮೊದಲೇ ಸಮುದ್ರದಲ್ಲಿ ನಾಲ್ಕು ವರ್ಷಗಳ ಹಿಂದೆ ಮುಳುಗಿರುವ ಹಡಗಿಗೆ ಡಿಕ್ಕಿಯಾಗಿ ಮುಳುಗಿದೆ ಎಂದು ಶಂಕಿಸಲಾಗಿದೆ.
ಉಳ್ಳಾಲದವರ ಮಾಲಕತ್ವದ ಬೋಟ್ ಇದಾಗಿದ್ದು ಮುಳುಗಿದ ಹಡಗಿನ ಅವಶೇಷಕ್ಕೆ ಯಾವುದೇ ಗುರುತಿನ ಬೋಯೆಯನ್ನು ಕಟ್ಟದೆ ಇರುವುದು ಅಧಿಕಾರಿಗಳ ಬೇಜವಬ್ದಾರಿಯು ಇಲ್ಲಿ ಎದ್ದು ಕಾಣುತ್ತಿದೆ. ಆಳ ಸಮುದ್ರ ಬೋಟು ಸಂಪೂರ್ಣ ಮುಳುಗಿದ್ದು ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆ. ಬೋಟಿನಲ್ಲಿ ಹತ್ತು ಜನ ಮೀನುಗಾರರಿದ್ದು ಒಂಭತ್ತು ಜನರನ್ನು ಮತ್ತೊಂದು ದೋಣಿಯವರು ರಕ್ಷಿಸಿದ್ದು, ಇನ್ನೋರ್ವ ಮೀನುಗಾರ ಕಣ್ಮರೆಯಾಗಿದ್ದಾರೆ, ಇತರ ಬೋಟುಗಳು ಆ ಪ್ರದೇಶದಲ್ಲಿ ಕಣ್ಮರೆಯಾದವನನ್ನು ಹುಡುಕುತ್ತಿವೆ