ಉಳ್ಳಾಲ, ಆ 05 (DaijiworldNews/PY): ಐಸಿಸ್ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಅಮ್ಮರ್ ರೆಹಮಾನ್ (29) ಅವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಉಳ್ಳಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಬಿ.ಎಂ ಇದಿನಬ್ಬ ಅವರ ಪುತ್ರ ಬಿ.ಎಂ ಪಾಷಾ ಅವರ ಮನೆಗೆ ಬುಧವಾರ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಬಿ. ಎಂ ಪಾಷಾ ಅವರ ಪುತ್ರ ಅಮ್ಮರ್ ಅಬ್ದುಲ್ ರೆಹಮಾನ್ ಅವರನ್ನು ಬಂಧಿಸಿದ್ದಾರೆ.
ಐಸಿಸ್ಗೆ ಸಾಮಾಜಿಕ ಜಾಲತಾಲಗಳ ಮೂಲಕ ಹಲವು ಆಪ್ಗಳಲ್ಲಿ ಆರ್ಥಿಕ ಧನ ಸಂಚಯ ಸೇರಿದಂತೆ ಐಸಿಸ್ಗೆ ಯುವಕರನ್ನು ಸೇರಿಸಲು ಪ್ರೇರೇಪಿಸುವ ವಿಚಾರದ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ. ದಾಳಿಯ ಸಂದರ್ಭ ಲ್ಯಾಪ್ಟಾಪ್, ಮೊಬೈಲ್ ಫೋನ್ ಹಾರ್ಡ್ ಡಿಸ್ಕ್, ಪೆನ್ಡ್ರೈವ್ ಹಾಗೂ ಹಲವು ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೆಹಲಿ, ಕೊಚ್ಚಿನ್ ಹಾಗೂ ಬೆಂಗಳೂರು ವ್ಯಾಪ್ತಿಗೆ ಸೇರಿದ ಅಧಿಕಾರಿಗಳು ತಂತ್ರಜ್ಞರನ್ನೊಳಗೊಂಡ 24 ಅಧಿಕಾರಿಗಳ ತಂಡ ಎರಡು ವಾಹನಗಳಲ್ಲಿ ಆಗಮಿಸಿದ್ದು, ಸುಮಾರು 15 ಗಂಟೆಗಳ ಕಾಲ ತನಿಖೆ ನಡೆಸಿ, ಓರ್ವನನ್ನು ವಶಕ್ಕೆ ಪಡೆದುಕೊಂಡಿದೆ. ಎನ್ಐಎ ತಂಡ ಕುಟುಂಬದ ಇನ್ನೋರ್ವ ಸದಸ್ಯೆಯ ಮೇಲೂ ನಿಗಾ ಇಟ್ಟಿದೆ. ಅಮ್ಮರ್ ಮೇಲೆ ಅಜೆಂಡಾಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚುರ ಪಡಿಸುತ್ತಿದ್ದ ಆರೋಪಗಳಿವೆ.
ಉದ್ಯಮಿ ಬಿ ಎಂ ಪಾಷಾ ಅವರು ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಇವರ ಪುತ್ರ ಹಿಂದೆ ವಿದೇಶದಲ್ಲಿದ್ದರು. ಈಗ ಊರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಬಾಷಾರ ಮೊಮ್ಮಗಳು ಈ ಹಿಂದೆ ಸಿರಿಯಾ ಉಗ್ರಗಾಮಿ ಸಂಘಟನೆ ಐಸಿಸ್ ಜೊತೆ ಲಿಂಕ್ ಹೊಂದಿದ್ದು, 2015ರಲ್ಲಿ ಕೇರಳದಿಂದ ನಾಪತ್ತೆಯಾಗಿದ್ದಳು. ಇದಾದ ಬಳಿಕ ಈ ಕುಟುಂಬದ ಮೇಲೆ ಐಎನ್ಎ ತಂಡ ಕಣ್ಣಿಟ್ಟಿದ್ದು, ಮೊಬೈಲ್ ದಾಖಲೆಗಳನ್ನು ಟ್ರ್ಯಾಪ್ ಮಾಡಿತ್ತು. ಈ ಆಧಾರದ ಮೇಲೆ ಎನ್ಐಎ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬಾಷಾ ಅವರ ಕುಟುಂಬದ ಕಿರಿಯ ಪುತ್ರ ಅನಾಸ್ ಹಾಗೂ ಆತನ ಪತ್ನಿ ಐಸಿಸ್ಗೆ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ಗಳನ್ನು ಸಬ್ಸ್ಕ್ರೈಬ್ ಮಾಡಿದ್ದು, ಎನ್ಐಎ ಕೆಂಗಣ್ಣಿಗೆ ಗುರಿಯಾಗಿದೆ. ಐಸಿಸ್ ಸಂಪರ್ಕ ಹಾಗೂ ಜಮ್ಮು-ಕಾಶ್ಮೀರದ ಉಗ್ರ ಸಂಘಟನೆಯ ಯುವಕರ ಜೊತೆ ಮೊಬೈಲ್ ಮೂಲಕ ಸಂಪರ್ಕವಿರುವ ಬಗ್ಗೆ ಮಾಹಿತಿ ಹಿನ್ನೆಲೆ ತಂತ್ರಾಂಶ ಸಮೇತ ದಾಳಿ ಮಾಡಲಾಗಿದೆ.
2021ರ ಮಾರ್ಚ್ನಲ್ಲಿ ಎನ್ಐಎ, ಕೊಲ್ಲಂ, ಕಣ್ಣೂರು, ಮಲಪುರಂ, ಬೆಂಗಳೂರು, ಹಾಗೂ ದೆಹಲಿಯಿಂದ ಸುಮಾರು 11 ಮಂದಿಯನ್ನು ಐಸಿಸ್ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಇವರ ಪ್ರಮುಖ ನಾಯಕ ಮಹಮ್ಮದ್ ಅಮೀನ್ ಯಾನೆ ಅಬೂ ಯಾಹ್ಯಾನಾಗಿದ್ದು, ಇವನ ನೇತೃತ್ವದಲ್ಲಿ ಟೆಲಿಗ್ರಾಂ, ಹೂಪ್, ಇನ್ಸ್ಟಾಗ್ರಾಂಗಳಲ್ಲಿ ಐಸಿಸ್ ಪರವಾದ ವಿಷಯಗಳನ್ನು ಪ್ರಚುರಪಡಿಸುವುದು ಹಾಗೂ ಜಿಹಾದಿ ಮಾನಸಿಕತೆಯನ್ನು ಯುವಕರಲ್ಲಿ ತುಂಬಿ ಅವರನ್ನು ಐಸಿಸ್ಗೆ ಸೇರ್ಪಡೆಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಈ ಆರೋಪದ ಮೇರೆಗೆ ಎಫ್ಐಆರ್ ದಾಖಲಿಸಿತ್ತು. ಐಸಿಸ್ ಪರ ಒಲವು ಇರುವ ಯುವಕರ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಈ ಆಧಾರದ ಮೇಲೆ ಉಳ್ಳಾಲಕ್ಕೆ ದಾಳಿ ನಡೆಸಿದ್ದು, ಅಮ್ಮರ್ನನ್ನು ಬಂಧಿಸಿ, ತಾಂತ್ರಿ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಹಲವು ಧಾರ್ಮಿಕ ಕೇಂದ್ರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಬಿ.ಎಂ ಪಾಷಾ ಸೇವೆ ಸಲ್ಲಿಸುತ್ತಿದ್ಧಾರೆ, ಮಗ ಅನಾಸ್ನ ಪತ್ನಿ ಮಕ್ಕಳಿಗೆ ತರಗತಿ ನಡೆಸಿಕೊಡುತ್ತಿದ್ದಳು. ಬಾಷಾ ಅವರ ಹಿರಿಯ ಪುತ್ರ ಅಮೀರ್ ಅಮೇರಿಕಾದಿಂದ ಬಂದ ನಂತರ ಆಶ್ರಮ ನಿರ್ಮಿಸಲು ಉದ್ದೇಶಿಸಿದ್ದು, ಆಸ್ತಿ ವಿವಾದದ ಕಾರಣದಿಂದ ಅಪ್ಪನ ವಿರುದ್ದವೇ ಪೊಲೀಸ್ ದೂರು ನೀಡಿ ತನಿಖೆ ನಡೆಸಿದ್ದು. ಹಾಗಾಗಿ ಐಸಿಸ್ ನಂಟು ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗಲು ಈ ಆಸ್ತಿ ವಿವಾದವೇ ಪರೋಕ್ಷ ಕಾರಣ ಎನ್ನಲಾಗಿದೆ.
ಎನ್ಐ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಮನೆಯಲ್ಲಿದ್ದ ಶಂಕಿತ ಮಹಿಳೆ ಮೊಬೈಲ್ ಅಡಗಿಸಿಟ್ಟಿದ್ದಳು. ಎನ್ಐಎ ಅಧಿಕಾರಿಗಳು ಮೊಬೈಲ್ ಕೇಳಿದಾಗ, ನಾನು ಮೊಬೈಲ್ ಅನ್ನು ದುಬೈನಲ್ಲೇ ಮರೆತು ಬಿಟ್ಟು ಬಂದಿದ್ದೇನೆ. ಮೊಬೈಲ್ ನನ್ನ ಬಳಿ ಇಲ್ಲ ಎಂದು ಹೇಳಿದ್ದಳು. ಬಳಿಕ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯನ್ನು ಕರೆಸಿ ನಾನಾ ರೀತಿಯಲ್ಲಿ ವಿಚಾರಣೆ ನಡೆಸಿ, ತಪಾಸಣೆ ನಡೆಸಿದ ವೇಳೆ ಮೊಬೈಲ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದೇ ಕುಟುಂಬದ ಸದಸ್ಯನೋರ್ವ ಐಸಿಸ್ ಒಲವು ಹೊಂದಿರುವುದು ಇನ್ನೋರ್ವ ಸದಸ್ಯೆಯೂ ಐಸಿಸ್ ಒಲವು ತೋರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಎನ್ಐಎ ತನಿಖೆ ಮುಂದುವರಿಸಿದೆ.