ಕುಂದಾಪುರ, ಆ 02 (DaijiworldNews/SM): ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರಿಯ ಶಾಸಕರಾಗಿ ಗುರುತಿಸಿಕೊಂಡಿರುವ ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಬೊಮ್ಮಾಯಿ ಸಂಪುಟದಲ್ಲಾದರೂ ಸಚಿವ ಸ್ಥಾನ ಸಿಗಬಹುದು ಎಂದುಕೊಂಡಿದ್ದ ಹಾಲಾಡಿಯವರಿಗೆ ಈ ಬಾರಿಗೂ ಮಣೆ ಹಾಕಿಲ್ಲ.
ಸರಳ ಸ್ವಭಾವ, ಪಕ್ಷ ನಿಷ್ಠೆಗೆ ಹಾಲಾಡಿ ಹೆಸರುವಾಸಿಯಾಗಿದ್ದಾರೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ದವಾಗಿರುವ ರಾಜಕಾರಣಿಯಾಗಿದ್ದಾರೆ. ಹಿರಿತನ ಹಾಗೂ ಅನುಭವದ ವಿಚಾರಗಳನ್ನು ಮುಂದಿಟ್ಟು ಹಾಗೂ ಪ್ರಾಮಾಣಿಕತೆ ಹಿನ್ನೆಲೆಯಲ್ಲಿ ಹಾಲಾಡಿಯವರಿಗೆ ಈ ಬಾರಿ ಹೈಕಮಾಂಡ್ ಮಣೆ ಹಾಕಲಿದೆ ಎನ್ನಲಾಗಿತ್ತು. ಆದರೆ, ಅವುಗಳಿಗೆ ತಣ್ಣೀರೆರೆಚಿದಂತಾಗಿದ್ದು, ಈ ಬಾರಿಯೂ ಹೈಕಮಾಂಡ್ ಪಟ್ಟಿಯಲ್ಲಿ ಹಾಲಾಡಿಯವರನ್ನು ಸೇರಿಸಿಲ್ಲ.
ಇನ್ನು ಕಳೆದ ಬಾರಿ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಹಾಲಾಡಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಕಡೆಗಳಿಗೆಯಲ್ಲಿ ಹಾಲಾಡಿಯವರನ್ನು ಬಿಎಸ್ ವೈ ಸಂಪುಟಕ್ಕೆ ಸೇರಿಸುವ ನಿರ್ಧಾರ ಕೈ ಬಿಡಲಾಗಿತ್ತು. ಆದರೆ, ಈ ಬಾರಿ ಬೊಮ್ಮಾಯಿ ಸಂಪುಟದಲ್ಲಿ ಮಾತ್ರ ಹಾಲಾಡಿಯವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿತ್ತು. ಆದರೆ, ಸ್ಥಾಪಿತ ಹಿತಾಸಕ್ತಿಗಳ ಲಾಬಿಯಿಂದಾಗಿ ಮತ್ತೊಮ್ಮೆ ಪ್ರಾಮಾಣಿಕ ರಾಜಕಾರಣಿಯೊಬ್ಬರಿಗೆ ಸಚಿವ ಸ್ಥಾನ ಕೈ ತಪ್ಪಿದೆ.
ಸದ್ಯ ಬೊಮ್ಮಾಯಿ ಸಂಪುಟ ಸೇರಿರುವ ಮಂತ್ರಿಗಳ ಪೈಕಿ ಕೆಲವರ ವಿರುದ್ಧ ಈಗಾಗಲೇ ಆರೋಪಗಳಿವೆ. ಆದರೂ, ದೆಹಲಿ ನಾಯಕರು ಅವರಿಗೆ ಕೊಕ್ ನೀಡದೆ ಮಣೆ ಹಾಕಿದೆ. ಆದರೆ, ಇಂತಹ ಪ್ರಾಮಾಣಿಕರನ್ನು ಸಂಪುಟದಿಂದ ದೂರ ಇಟ್ಟಿರುವುದೇಕೆ ಎನ್ನುವುದೇ ಪ್ರಶ್ನೆಯಾಗಿ ಉಳಿದಿದೆ. ಮುಂದೆ ಮತ್ತೊಂದೆ ಹಂತದಲ್ಲಿ ಸಂಪುಟ ವಿಸ್ತರಣೆಯಾಗುವ ಸಂದರ್ಭದಲ್ಲಾದರೂ ಸಿಎಂ ಬೊಮ್ಮಾಯಿ ಹಾಗೂ ಹೈಕಮಾಂಡ್ ಹಾಲಾಡಿಯವರನ್ನು ಪರಿಗಣಿಸುತ್ತಾ ಎನ್ನುವುದಕ್ಕೆ ಕಾಲವೇ ಉತ್ತರ ನೀಡಲಿದೆ.