ಮಂಗಳೂರು: ಆ 02 (DaijiworldNews/SM): ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಇದೀಗ ಬೊಮ್ಮಾಯಿ ಸಂಪುಟದಲ್ಲೂ ಸಚಿವ ಸ್ಥಾನ ಲಭಿಸಿದೆ. ಆ ಮೂಲಕ ಮತ್ತೊಮ್ಮೆ ಬಿಜೆಪಿ ಹೈ ಕಮಾಂಡ್ ಸರಳ ಸಜ್ಜನ ರಾಜಕಾರಣಿಗಳಿಗೆ ಮಣೆ ಹಾಕಿದೆ.
ಮತ್ತೊಂದೆಡೆ ಸುಳ್ಯ ಕ್ಷೇತ್ರದ ಶಾಸಕರಾಗಿದ್ದ ಎಸ್. ಅಂಗಾರ ಅವರನ್ನು ಕೂಡ ಬೊಮ್ಮಾಯಿ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದ್ದು, ಅಂಗಾರ ಅವರನ್ನು ಎರಡನೇ ಬಾರಿಗೆ ಸಚಿವರನ್ನಾಗಿ ನೇಮಿಸಲಾಗಿದೆ. ಈ ಇಬ್ಬರು ಸಚಿವರು ಕೂಡ ಸರಳ ಸ್ವಭಾವದವರಾಗಿದ್ದಾರೆ. ಕೋಟ ಶ್ರೀನಿವಾಸ್ ಪೂಜಾರಿ ವಿಧಾನ ಪರಿಷತ್ ನಿಂದ ಆಯ್ಕೆಯಾಗಿದ್ದರೆ, ಅಂಗಾರ ವಿಧಾನಸಭೆಯ ಶಾಸಕರಾಗಿದ್ದಾರೆ.
ಬುಧವಾರದಂದು ಸಚಿವರ ಪಟ್ಟಿ ಪ್ರಕಟಗೊಂಡ ಸಂದರ್ಭದಲ್ಲಿ ಅಂಗಾರ ಅವರ ಹೆಸರು ಆರಂಭದಲ್ಲಿ ಕೇಳಿಬಂದಿತ್ತು. ಸುನಿಲ್ ಕುಮಾರ್ ಅವರ ಹೆಸರು ಕೂಡ ಆರಂಭದಲ್ಲಿ ಪ್ರಕಟವಾಗಿತ್ತು. ಆದರೆ, ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಸಂಪುಟದಿಂದ ಕೈ ಬಿಡಲಾಗಿದೆ ಎನ್ನಲಾಗಿತ್ತು. ಕಡೇ ಗಳಿಗೆಯಲ್ಲಿ ಸಂಪುಟ ಸೇರುವಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಸಫಲರಾಗಿದ್ದಾರೆ. ಇನ್ನು ಕೋಟ ಶ್ರೀನಿವಾಸ್ ಪೂಜಾರಿ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸಂಪುಟದ ಹಾದಿ ಸುಗಮವಾಗಿದೆ ಎನ್ನಲಾಗಿದೆ. ಆ ಮೂಲಕ ಕರಾವಳಿಯ ಮೂವರು ಸಜ್ಜನ ರಾಜಕಾರಣಿಗಳಿಗೆ ಸಚಿವ ಸ್ಥಾನ ನೀಡಲಾಗಿದ್ದು, ಕೋಟ ಹಾಗೂ ಅಂಗಾರ ಅವರು ಬಿಎಸ್ ವೈ ಸಂಪುಟದಲ್ಲೂ ಕೂಡ ಸಚಿವರಾಗಿದ್ದರು. ಈ ಬಾರಿ ಕರಾವಳಿಯ ಮಂತ್ರಿಗಳಿಗೆ ಯಾವ ಖಾತೆ ದೊರೆಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.