ಮಲ್ಪೆ, ಆ 04 (DaijiworldNews/MS): ಕೊರೊನಾ ಲಾಕ್ ಡೌನ್ ಬಳಿಕ ಮಲ್ಪೆ ಕಡಲತೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ದೂರದೂರುಗಳಿಂದ ಬರುವ ಪ್ರವಾಸಿಗರು ಸ್ಥಳೀಯರು ಎಚ್ಚರಿಕೆ ಮೀರಿ ನೀರಿಗಿಳಿದು ಅಪಾಯಕ್ಕೆ ಆಹ್ವಾನ ನೀಡುವುದು ಸಾಮಾನ್ಯವಾಗಿದೆ. ಆ.1 ರಂದು ಮತ್ತೆ ದುರ್ಘಟನೆ ಮರುಕಳಿಸಿದ್ದು ಮೈಸೂರಿನಿಂದ ಬಂದ ನಾಲ್ವರು ಸಮುದ್ರಪಾಲಾಗಿದ್ದರು. ಈ ಪೈಕಿ ಮೂವರನ್ನು ಸ್ಥಳೀಯರು ರಕ್ಷಿಸಿದ್ದರೂ ದೇಚಮ್ಮ ಎಂಬ 19 ವರ್ಷದ ಯುವತಿ ನೀರುಪಾಲಾಗಿ ಮೃತಪಟ್ಟಿದ್ದಳು.
ಇದಾದ ಬಳಿಕ ಮಲೆ ಬೀಚ್ ಪ್ರಾಧಿಕಾರವು ಆ.04 ರ ಬುಧವಾರಂದು ಮಲ್ಪೆ ಬೀಚ್ ಸುತ್ತ ಸುರಕ್ಷತಾ ಬೇಲಿ ನಿರ್ಮಿಸಿದ್ದು, ಎಚ್ಚರಿಕೆ ಫಲಕದ ಮೂಲಕ ಮಲ್ಪೆ ಬೀಚ್ಗೆ ಭೇಟಿ ನೀಡುವವರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಸುಮಾರು 5-6 ಅಡಿ ಎತ್ತರದ ತಡೆ ಬೇಲಿ ಯನ್ನು ಒಂದು ಕಿಲೋಮೀಟರ್ ದೂರದವರೆಗೆ ಅಳವಡಿಸಲಾಗಿದೆ. ಇದಲ್ಲದೆ ಸಮುದ್ರ ತೀರದಲ್ಲಿ ಎಚ್ಚರಿಕೆ ಸಂಕೇತವಾಗಿ ಕೆಂಪು ಧ್ವಜಗಳನ್ನು ಹಾಕಲಾಗಿದ್ದು, "ಡೇಂಜರ್, ನೋ ಎಂಟ್ರಿ" ಎಂಬ ಫಲಕಗಳನ್ನು ಹಾಕಲಾಗಿದೆ. ಯಾವುದೇ ಪ್ರವಾಸಿಗರು ತಡೆಬೇಲಿಯನ್ನು ಮೀರಿ ಸಮುದ್ರಕ್ಕೆ ಪ್ರವೇಶಿಸಿದರೆ 500 ರೂ ದಂಡ ವಿಧಿಸಲಾಗುವುದು.
" ಈ ಅವಧಿಯಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿರುತ್ತದೆ. ಕಡಲತೀರದಲ್ಲಿ ಲೈಫ್ ಗಾರ್ಡ್ ಸೌಲಭ್ಯವಿದ್ದರೂ, ಮಳೆಗಾಲದಲ್ಲಿ ಸಮುದ್ರವನ್ನು ಪ್ರವೇಶಿಸುವುದು ತೀರಾ ಅಪಾಯಕಾರಿಯಾಗಿದೆ. ಯಾವುದೇ ಪ್ರವಾಸಿಗರು ಸಮುದ್ರತೀರದಲ್ಲಿ ಅಳವಡಿಸಿರುವ ಬಲೆ ದಾಟಬಾರದು. ಆಗಸ್ಟ್ ತಿಂಗಳ ಕೊನೆಯಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಕಡಲ ಅಬ್ಬರ ಏರಿಳಿತ ನೋಡಿಕೊಂಡು ಕೆಂಪು ಧ್ವಜಗಳನ್ನು ತೆಗೆಯಲಾಗುತ್ತದೆ. ನಾವು ಕೆಂಪು ಬಾವುಟಗಳನ್ನು ಹಳದಿ ಧ್ವಜಗಳೊಂದಿಗೆ ಬದಲಾಯಿಸುವವರೆಗೂ ಪ್ರವಾಸಿಗರು ಸಮುದ್ರವನ್ನು ಪ್ರವೇಶಿಸಬಾರದು. ಹಳದಿ ಧ್ವಜಗಳು ಸಮುದ್ರವನ್ನು ಪ್ರವೇಶಿಸುವುದು ಸುರಕ್ಷಿತವೆಂದು ಸೂಚಿಸುತ್ತವೆ. ಪ್ರವಾಸಿಗರು ನಿಯಮಗಳನ್ನು ಅನುಸರಿಸುವಂತೆ ನಾವು ವಿನಂತಿಸುತ್ತೇವೆ"ಎಂದು ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.