ಮಂಗಳೂರು, ಆ 04 (DaijiworldNews/MS): ಮಂಗಳೂರು ಮಹಾನಗರದ ವಾರ್ಡ್ ಸಮಿತಿ ಸದಸ್ಯರ ಸಮಿತಿ ರಚನೆಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಆರೋಪಿಸಿದ್ದಾರೆ.
ಆ.4 ಬುಧವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಲೋಬೊ, 'ಮಂಗಳೂರು ನಗರ ಪಾಲಿಕೆಯ ವಾರ್ಡ್ ಸಮಿತಿಗಳನ್ನು ರಚಿಸುವಂತೆ ಹೈಕೋರ್ಟ್ ನಿರ್ದೇಶಿಸಿತ್ತು. ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 60 ವಾರ್ಡ್ಗಳ ಸಮಿತಿಗೆ 1278 ಮಂದಿ ವಾರ್ಡ್ ಸಮಿತಿಯ ಭಾಗವಾಗಲು ಆಸಕ್ತಿ ತೋರಿಸಿದ್ದು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 600 ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆದರೆ ಆಯ್ಕೆ ಮಾಡಲಾದ ಸದಸ್ಯರ ಪೈಕಿ ಶೇ.90ರಷ್ಟು ಮಂದಿ ಬಿಜೆಪಿ ಸದಸ್ಯರಾಗಿದ್ದಾರೆ . ಕರ್ನಾಟಕ ಮುನ್ಸಿಪಲ್ ಕಾಯ್ದೆಯ ಪ್ರಕಾರ ಸದಸ್ಯರು ಯಾವುದೇ ರಾಜಕೀಯ ಚಟುವಟಿಕೆಗಳು ಅಥವಾ ಪಕ್ಷಗಳೊಂದಿಗೆ ಒಡನಾಟ ಹೊಂದಿರಬಾರದು ಮತ್ತು ರಾಜಕೀಯ ಪಕ್ಷಕ್ಕೆ ಸಂಬಂಧ ಹೊಂದಿರಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಸದ್ಯದ ವಾರ್ಡ್ ಕಮಿಟಿಗಳಲ್ಲಿ ಶೇ.90ರಷ್ಟು ಅನುಮೋದಿತ ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ ಅಲ್ಲದೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ವಾರ್ಡ್ ಕಮಿಟಿ ಸದಸ್ಯರನ್ನು ರಚಿಸುವಾಗ ಸಂಪೂರ್ಣವಾಗಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರೂ ಕೂಡ ಅವರನ್ನು ಕೈ ಬಿಡಬೇಕು. ಅಲ್ಲದೇ ಪಾಲಿಕೆ ಆಯುಕ್ತರನ್ನು ವಾರ್ಡ್ ಕಮಿಟಿ ಸದಸ್ಯರ ಪಟ್ಟಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಸೇವಾಂಜಲಿ ಟ್ರಸ್ಟ್ ಅನ್ನು ಎನ್ ಜಿಓ ಎಂದು ಪರಿಗಣಿಸಲಾಗಿದೆ. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷರಾಗಿರುವ ಸೇವಾಂಜಲಿ ಟ್ರಸ್ಟ್ ಅನ್ನು ಈ ಸಮಿತಿಗೆ ಹೇಗೆ ಸೇರ್ಪಡೆ ಮಾಡಲಾಗಿದೆ ಎಂದು ಜೆ.ಆರ್.ಲೋಬೋ ಪ್ರಶ್ನಿಸಿದರು.
ಮನಪಾ ಆಯುಕ್ತರು ಕಾನೂನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿದ ಅವರು ಆಯುಕ್ತರು ಐಎಎಸ್ ಅಧಿಕಾರಿಯಾ ಅಥವಾ ಬಿಜೆಪಿ ಪಕ್ಷದ ಅಡಿಯಾಳಾ? ಎಂದು ಪ್ರಶ್ನಿಸಿದರು.
ಇದೇ ವೇಳೆ ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಕಾಂಗ್ರೆಸ್ ಮುಖಂಡ ವಿಶ್ವಾಸ್ ಕುಮಾರ್ ದಾಸ್, ಸುಬೋಧ ಆಳ್ವ, ಮಹಾಬಲ ಮಾರ್ಲ ಮುಂತಾದವರು ಉಪಸ್ಥಿತರಿದ್ದರು.