ಉಡುಪಿ, ಆ 04 (DaijiworldNews/MS): ಕರೊನಾ ಸೋಂಕಿನ ಆತಂಕ, ಲಾಕ್ಡೌನ್ ಹಿನ್ನೆಲೆಯಲ್ಲಿ ಜನರ ನಡುವಿನ ಸಂಪರ್ಕ ಕಡಿಮೆಯಾಗಿದ್ದು, ಬಹುತೇಕರು ಆನ್ಲೈನ್ ವ್ಯವಹಾರ ನೆಚ್ಚಿಕೊಂಡಿದ್ದಾರೆ. ಇದನ್ನೇ ಲಾಭವಾಗಿಸಿಕೊಂಡ ವಂಚಕರು ಹಣ ಕೊಳ್ಳೆ ಹೊಡೆಯುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ಅಕ್ಷರಸ್ಥರೇ ಆನ್ ಲೈನ್ ವಂಚಕರ ಖೆಡ್ಡಾಕ್ಕೆ ಬೀಳುತ್ತಿರುವುದು ವಿಪರ್ಯಾಸ. ಉಡುಪಿಯಲ್ಲೂ ಇಂಥಹ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಮೊದಲ ಪ್ರಕರಣದಲ್ಲಿ ಕೆಎಂಸಿ ಮಣಿಪಾಲದ ಫಾರ್ಮಕಾಲಜಿಯಲ್ಲಿ ಅಸೋಸಿಯೇಟ್ ಫ್ರೋಪೆಸರ್ ಆಗಿರುವ ಅಂಬೆರ್ ಕರ್ ಮೋಹನ್ ಬಾಬು .ವಿ (43), ಇವರು ಎಸ್ ಬಿಐ ಬ್ಯಾಂಕ್ ಮಣಿಪಾಲದಲ್ಲಿ ಖಾತೆ ಹೊಂದಿದ್ದು, ಅಪರಿಚಿತ ಸಂಖ್ಯೆಯಿಂದ ಆ.08 ರಂದು ಇವರ ಮೊಬೈಲ್ ಗೆ ಸಂದೇಶ ಬಂದಿದೆ. ಬ್ಯಾಂಕ್ ಖಾತೆಯ ಕೆವೈಸಿ ಅಪ್ ಡೇಟ್ ಮಾಡುವಂತೆ ಲಿಂಕ್ ಕಳುಹಿಸಿದ್ದು, ಲಿಂಕ್ ಕ್ಲಿಕ್ ಮಾಡಿದಾಗ ಇವರ ಬ್ಯಾಂಕ್ ಖಾತೆಯಿಂದ 2 ಸಲ ಟ್ರಾನ್ಸ್ ಕ್ಷನ್ ಮಾಡಿ ರೂಪಾಯಿ 20,000 ಹಾಗೂ 13,500 ರೂಪಾಯಿಯಂತೆ ಒಟ್ಟು 33,500ರೂ. ಹಣವನ್ನು ವಿದ್ ಡ್ರಾ ಆಗಿದೆ.
ಇನ್ನು ಎರಡನೇ ಪ್ರಕರಣದಲ್ಲಿ ಶಂಕರಪುರ ಲಿನೆಟ್ ಸೀಮಾ ರೊಡ್ರಿಗಸ್ (38) ಎಂಬವರು ಕುವೈಟ್ ದೇಶದಲ್ಲಿ ಉದ್ಯೋಗದಲ್ಲಿದ್ದು, ಮೇ. 19 ರಂದು ಫೇಸ್ಬುಕ್ ಮೂಲಕ ಡಾ. ಆ್ಯಂಡ್ರಿವ್ ಫೆಲಿಕ್ಸ್ ಎಂಬಾತನ ಪರಿಚಯ ಆಗಿದೆ. ಆ ಬಳಿಕ ಆರೋಪಿಯು ತಾನು ಡಾಕ್ಟರ್ ಆಗಿದ್ದು, ದೆಹಲಿಗೆ ಬಂದು ಒಂದು ಫಾರ್ಮಸಿಯನ್ನು ತೆರೆಯುಲಿದ್ದೇನೆ ಎಂದು ನಂಬಿಸಿ ವಾಟ್ಸಪ್ ನಂಬರ್ ಬಡೆದುಕೊಂಡಿದ್ದಾನೆ. ಇದರೊಂದಿಗೆ ಹಂತ ಹಂತವಾಗಿ ರೂಪಾಯಿ 19 ಲಕ್ಷ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಮೋಸ ಹಾಗೂ ನಂಬಿಕೆ ದ್ರೋಹ ಮಾಡಿದ್ದಾನೆ.
ಈ ಎರಡು ಪ್ರಕರಣದ ಕುರಿತು ಉಡುಪಿ ನಗರ ಪೊಲೀಸ್ ಠಾಣೆ ಪ್ರತ್ಯೇಕ ದೂರು ದಾಖಲಾಗಿದೆ.