ಕಾಸರಗೋಡು, ಆ. 03 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದ ದ್ರಷ್ಟಿಯಿಂದ ಸೋಂಕಿತರ ಸಂಪರ್ಕ ಪಟ್ಟಿ ತಯಾರಿಸಿ ತಪಾಸಣೆ ಮತ್ತಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ಯಲ್ಲಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳ ಚಟುವಟಿಕೆ ಚುರುಕುಗೊಳಿಸಲಾಗುವುದು. ನ್ಯಾಷನಲ್ ಹೆಲ್ತ್ ಮಿಷನ್ ಜಿಲ್ಲಾ ಪ್ರಾಜೆಕ್ಟ್ ಮೆನೇಜರ್ ಡಾ.ಎ.ವಿ.ರಾಮದಾಸ್ ಕೋವಿಡ್ ನಿಯಂತ್ರಣದ ಮಾಹಿತಿ ನೀಡಿದರು. ರೂಂ ಕ್ವಾರೆಂಟೈನ್, ಪ್ರತ್ಯೇಕ ಶೌಚಾಲಯ ಸಹಿತ ಕೋವಿಡ್ ರೋಗಿಗಳಿಗೆ ಬೇಕಿರುವ ಎಲ್ಲಾ ಸೌಲಭ್ಯಗಳಿದ್ದಲ್ಲಿ ಮಾತ್ರ ಮನೆಗಳಲ್ಲಿ ನಿಗಾ ಪ್ರವೇಶಿಸಬಹುದು. ಇಲ್ಲವಾದಲ್ಲಿ ಕಡ್ಡಾಯವಾಗಿ ಡೋಮಿಸಲರಿ ಕೇರ್ ಸೆಂಟರ್ ಗಳಿಗೆ ದಾಖಲಾಗಬೇಕು. ಮನೆಗಳಲ್ಲಿ ರೋಗ ಹರಡುವಿಕೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಪ್ರಕಟಿಸಲಾಗಿದೆ.
ಎಲ್ಲಾ ಪಂಚಾಯತ್ ಗಳಲ್ಲಿ ಡೋಮಿಸಲರಿ ಕೇರ್ ಸೆಂಟರ್ ಗಳು ಸಜ್ಜಾಗಿದೆ. ರೋಗ ಲಕ್ಷಣಗಳಿಲ್ಲದೇ ಇರುವ, ಆರೋಗ್ಯ ಸಮಸ್ಯೆಗಳಿಲ್ಲದೆ. ಕೋವಿಡ್ ಕಡ್ಡಾಯವಾಗಿ ಸಿ.ಎಫ್.ಎಲ್.ಟಿ.ಗೆ ದಾಖಲಾಗಬೇಕು ಎಂದು ಆದೇಶಿಸಲಾಗಿದೆ. ಕೋವಿಡ್ ಪಾಸಿಟಿವ್ ಆಗುವ ಎರಡು ದಿನಗಳ ಹಿಂದೆ ಮತ್ತು ಮುಂದಿನ ಮೂರು ದಿನಗಳಲ್ಲಿ ನೇರ ಸಂಪರ್ಕಹೊಂದಿರುವ ಮಂದಿಯನ್ನು ನಿಗಾದಲ್ಲಿ ದಾಖಲಿಸಲಾಗುವುದು. ಈ ಸಂಬಂಧ ಮಾಹಿತಿಗಳನ್ನು ದಾಖಲಿಸಲಾಗುವುದು ಮತ್ತು ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳಿಗೆ ಈ ಹೊಣೆ ನೀಡಲಾಗುವುದು. ಕಂಟೈನ್ಮೆಂಟ್ ಝೋನ್ ಕೇಂದ್ರೀಕರಿಸಿ ಜಾಗೃತಿ ಸಮಿತಿಗಳ ಚಟುವಟಿಕೆ ಚುರುಕುಗೊಳಿಸಲಾಗುವುದು. ಪಂಚಾಯತ್ ಗಳಲ್ಲಿ ಕೋವಿಡ್ ಪಾಸಿಟಿವ್ ಆಗಿರುವ ರೋಗಿಗಳಿಗೆ ಪಲ್ಸ್ ಆಕ್ಸಿ ಮೀಟರ್ ಲಭ್ಯವಾಗುತ್ತಿದೆ ಎಂಬ ಖಾತರಿ ಪಡಿಸಲಾಗುವುದು . ಆರ್.ಟಿ.ಪಿ.ಸಿ.ಆರ್. ತಪಾಸಣೆ ನಡೆಸಿ ಫಲಿತಾಂಶ ಲಭಿಸುವ ವರೆಗೆ ಯಾರ ಸಂಪರ್ಕ ನಡೆಸದೆ ನಿಗಾ ಪ್ರವೇಶಿಸುವಂತೆ ಆದೇಶಿಸಲಾಗಿದೆ. ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳು ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಕ್ವಾರೆಂಟೈನ್ ಖಚಿತಪಡಿಸುವಂತೆ ಆದೇಶಿಸಲಾಗಿದೆ.