ಕುಂದಾಪುರ,ಆ.03 (DaijiworldNews/HR): "ಸವಿತಾ ಸಮಾಜದ ಸಹಕಾರಿ ಸಂಘ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ. ಇವತ್ತು ಸವಿತಾ ಸಮಾಜ ಸಹಕಾರ ಸಂಘ, ಜಿಲ್ಲಾ ಮತ್ತು ತಾಲೂಕು ಸವಿತಾ ಸಮಾಜದ ಸಂಘಗಳ ಸಹಕಾರದೊಂದಿಗೆ 200ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತವಾಗಿ ನಡೆಸುವ ಇಚ್ಛೆಯನ್ನು ಸಂಘವು ಹೊಂದಿದೆ" ಎಂದು ಸವಿತಾ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಭಂಡಾರಿ ಹೇಳಿದರು.
ಸವಿತಾ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಅಂಬಲಪಾಡಿ ಉಡುಪಿ ಹಾಗೂ ಸವಿತಾ ಸಮಾಜ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಮಂಗಳೂರು ವೃತ್ತ ಕುಂದಾಪುರ ವಿಭಾಗ ಶಂಕರನಾರಾಯಣ ವಲಯ ವತಿಯಿಂದ ಸವಿತಾ ಸಸ್ಯಶಾಮಲ 2021 ಮಂಗಳವಾರ ಆಜ್ರಿ ಪರಿಸರದಲ್ಲಿ 200ಕ್ಕೂ ಹೆಚ್ಚು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ನಮ್ಮ ಸಂಸ್ಥೆಯು ಉಡುಪಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ, ಕಾರ್ಕಳ, ಕುಂದಾಪುರ, ಕಾಪುವಿನಲ್ಲಿ ಶಾಖೆಗಳನ್ನು ಹೊಂದಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಸುಮಾರು 6 ಲಕ್ಷ ವೆಚ್ಚದಲ್ಲಿ ಸಮಾಜದ ಬಂಧುಗಳಿಗೆ ಆಹಾರದ ಕಿಟ್ಗಳನ್ನು ಒದಗಿಸಿದ್ದೇವೆ. ಕೋವಿಡ್ ಸೋಂಕಿತರಿಗೆ ಧನ ಸಹಾಯವನ್ನು ಮಾಡಿದ್ದೇವೆ. ಇತರ ಸಮುದಾಯಕ್ಕೂ ಸ್ಪಂದಿಸುವ ನಿಟ್ಟಿನಲ್ಲಿ ಸುಮಾರು 6 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ, ಶಿಕ್ಷಕವೃಂದದವರಿಗೆ ಸ್ಯಾನಿಟೈಸರ್, ಮಾಸ್ಕ್ಗಳ ವಿತರಣೆ ಮಾಡಿದ್ದೇವೆ" ಎಂದರು.
ಈ ಸಂದರ್ಭಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ವಿಶ್ವನಾಥ ಭಂಡಾರಿ ನೆಂಜೂರು, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರಾ, ಕೋಶಾಧಿಕಾರಿ ಶೇಖರ್ ಸಾಲಿಯಾನ್, ಸಂಘದ ನಿರ್ದೇಶಕರಾದ ಮಂಜುನಾಥ ಭಂಡಾರಿ ಪಡುಕೆರೆ, ನವೀನ್ ಭಂಡಾರಿ ಬಸ್ರೂರು, ನಾಗೇಶ್ ಭಂಡಾರಿ ಬಜಗೋಳಿ, ಸಿದ್ದಾಪುರ ಘಟಕದ ಅಧ್ಯಕ್ಷ ರಾಜು ಭಂಡಾರಿ, ಕಾರ್ಯದರ್ಶಿ ನಾಗರಾಜ ಭಂಡಾರಿ, ಶ್ಯಾಮ್ ಭಂಡಾರಿ ಸಂಘದ ಸರ್ವ ಸದಸ್ಯರು ಹಾಗೂ ಶಂಕರನಾರಾಯಣ ವಲಯ ಅರಣ್ಯ ರಕ್ಷಕರಾದ ಝಹೀರ್ ಅಬ್ಬಾಸ್, ಅರಣ್ಯ ವೀಕ್ಷಕರಾದ ಶೇಖರ್ ಕುಲಾಲ್, ಭಾಸ್ಕರ್ ಕೊಠಾರಿ ಮೊದಲಾದವರು ಉಪಸ್ಥಿತರಿದ್ದರು.