ಪುತ್ತೂರು, ಆ 02 (DaijiworldNews/SM): ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಬಾರದ ಸಮಯದಲ್ಲಿ ಮತ್ತೆ ಕೋವಿಡ್ ಹೆಚ್ಚಳ ಆಗುತ್ತಿದೆ. ಈ ನಿಟ್ಟಿನಲ್ಲಿ ಕೇರಳದಿಂದ ಪುತ್ತೂರು ಸಂಪರ್ಕಿಸುವ ಅಧಿಕೃತ ರಸ್ತೆಗಳನ್ನು ಹೊರತು ಪಡಿಸಿ ಉಳಿದ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಿ ಎಂದು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪುತ್ತೂರಿನಲ್ಲಿ ಕೋವಿಡ್ ಏರಿಕೆ ಕಂಡ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಕೋವಿಡ್ ನಿರ್ವಹಣೆ ಕುರಿತು ಆ.2ರಂದು ತಾ.ಪಂ ಸಭಾಂಗಣದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕೃತ ರಸ್ತೆಯಲ್ಲಿ ಚೆಕ್ಪೋಸ್ಟ್ ಮಾಡಿ ತಪಾಸಣೆ ನಡೆಸಬಹುದು. ಉಳಿದ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದರೆ ಸಾಕಾಗುವುದಿಲ್ಲ. ಅಲ್ಲಿ ರಸ್ತೆಗೆ ಮಣ್ಣು ಹಾಕಿ ಪೂರ್ತಿ ಬಂದ್ ಮಾಡಬೇಕು. ಇಲ್ಲದಿದ್ದರೆ ಬ್ಯಾರಿಕೇಡ್ ಓಪನ್ ಮಾಡಿ ಬರುವವರಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬರುವ ತನಕ ಈ ಕೆಲಸ ಆಗಬೇಕು. ಕೋವಿಡ್ ಲಾಕ್ಡೌನ್ ಯಾವಾಗ ತೆರವಾಯಿತೋ ಅಂದಿನಿಂದ ನಾವು ನಮ್ಮ ನಮ್ಮ ಕೆಲಸಕ್ಕೆ ಒತ್ತು ಕೊಟ್ಟಾಗ ಕೋವಿಡ್ ಕಾರ್ಯಕ್ಕೆ ನಮ್ಮ ಗಮನ ಕಡಿಮೆ ಆಯಿತು. ಪಂಚಾಯತ್ ಮಟ್ಟದಲ್ಲಿರುವ ಕಾರ್ಯಪಡೆ ಮರೆತು ಹೋಗಿದ್ದರಿಂದ ಇವತ್ತು ಕೋವಿಡ್ ಲಾಕ್ಡೌನ್ ಮತ್ತೊಮ್ಮೆ ಎದುರಿಸುವ ಸಂಗತಿ ಆಗುತ್ತಿದೆ.
ಮೈಮರೆತದ ಪರಿಣಾಮ ಇವತ್ತು ಅನುಭವಿಸಬೇಕಾಗುತ್ತಿದೆ. ಇನ್ನೊಮ್ಮೆ ಕಾರ್ಯಪಡೆಯನ್ನು ಎಬ್ಬಿಸುವ ಸಂಗತಿ ಮಾಡಬೇಕು. ಕೋವಿಡ್ ನಿಯಂತ್ರಣಕ್ಕೆ ತರದಿದ್ದರೆ ಮತ್ತೆ ಲಾಕ್ಡೌನ್ ಎದುರಿಸುವ ಸಂಗತಿ ಆಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ನಮ್ಮ ಕೋವಿಡ್ ರೇಟಿಂಗ್ ಶೇ.5ರ ಹತ್ತಿರ ಬರುತ್ತಿದೆ. ಶೇ. 5ಬಂದರೆ ಮತ್ತೆ ಖಂಡಿತಾ ಲಾಕ್ಡೌನ್ ಆಗುತ್ತದೆ. ಲಾಕ್ಡೌನ್ ಬೇಕೋ ಅನ್ಲಾಕ್ ಬೇಕೋ ಈ ನಿಟ್ಟಿನಲ್ಲಿ ನಾವು ಕಾರ್ಯಗತಗೊಳ್ಳಬೇಕೆಂದರು.
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ತಹಸೀಲ್ದಾರ್ ರಮೇಶ್ ಬಾಬು, ಕಡಬ ತಹಶೀಲ್ದಾರ್ ಅನಂತ ಶಂಕರ್, ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ನವೀನ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮತ್ತು ಕೋವಿಡ್ ಟಾಸ್ಕ್ಪೋರ್ಸ್, ಪ್ಲೈಯಿಂಗ್ ಸ್ಕಾಡ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದರು.