ಕುಂದಾಪುರ, ಆ 02 (DaijiworldNews/PY): ಕುಂದಾಪುರ ತಾಲೂಕು ಕಾಳಾವರದಲ್ಲಿ ಫೈನಾನ್ಸ್ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ (33) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನೂಪ್ ಶೆಟ್ಟಿ ಗೋವಾದ ಹೋಟೆಲ್ವೊಂದರಲ್ಲಿ ಮೂರು ದಿನಗಳ ಹಿಂದೆ ರೂಂ ಬುಕ್ ಮಾಡಿದ್ದ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಅಜೇಂದ್ರ ಶೆಟ್ಟಿ ಅವರನ್ನು ಕೊಲೆ ಮಾಡಿ ಗೋವಾಕ್ಕೆ ಪರಾರಿಯಾಗುವ ಯೋಜನೆಯನ್ನು ಮೊದಲೇ ಹಾಕಿಕೊಂಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.
ಕೊಲೆ ಪ್ರಕರಣದ ಆರೋಪಿಯ ಪತ್ತೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮತ್ತು ಪೊಲೀಸ್ ಉಪಾಧೀಕ್ಷಕ ಕೆ, ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ, ಕುಂದಾಪುರ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿಯ ಪತ್ತೆಗೆ ಕಳುಹಿಸಿಕೊಟ್ಟಿದ್ದು, ಜುಲೈ 31ರ ಶನಿವಾರ ಕೊಲೆ ಆರೋಪಿ ಅನೂಪ್ ಶೆಟ್ಟಿಯನ್ನು ಗೋವಾದ ಕೊಲ್ವಾ ಬೀಚ್ ಬಳಿ ಬಂಧಿಸಿದ್ದು, ಈ ವೇಳೆ ಆತ ಪರಾರಿಯಾಗಲು ಬಳಸಿದ್ದ ಕಾರನ್ನು ಕೂಡಾ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಆಗಸ್ಟ್ 1ರಂದು ಕುಂದಾಪುರಕ್ಕೆ ಕರೆದುಕೊಂಡು ಬಂದಿದ್ದು, ತನಿಖಾಧಿಕಾರಿ ಮುಂದೆ ಹಾಜರುಪಡಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಅನೂಪ್ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಗೋವಾದ ಪ್ರವಾಸಿ ಹೊಟೇಲ್ವೊಂದರಲ್ಲಿ ತೆಗೆದು ಪೋಟೋವೊಂದನ್ನು ಪೋಸ್ಟ್ ಮಾಡಿದ್ದು, ಮೈ ಫೇವರೇಟ್ ಪ್ಲೇಸ್ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಆತನ ಸ್ನೇಹಿತರೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿಯ ಮೇರೆಗೆ ಕಾರ್ಯಚರಣೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಗೋವಾದಲ್ಲಿ ಪತ್ತೆಹಚ್ಚಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಆರೋಪಿ ಅನೂಪ್ ಮಾದಕ ವ್ಯಸನ ಚಟಕ್ಕೆ ಬಿದ್ದಿರಬಹುದು ಎನ್ನುವ ಆರೋಪ ಕೇಳಿ ಬರುತ್ತಿದೆ. ಕೊಲೆ ನಡೆಸುವ ಮುನ್ನ ಈತ ವಿಪರೀತ ಒಣ ಹಣ್ಣುಗಳನ್ನು ಸೇವಿಸಿದ್ದಲ್ಲದೇ, ಆ ಬಳಿಕ ಗಾಂಜಾ ಸೇವಿಸಿದ್ದು, ಅದರ ಮತ್ತಿನಲ್ಲಿ ಕೊಲೆ ನಡೆಸಿರಬಹುದೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಫೈನಾನ್ಸ್ ಕಚೇರಿಯಲ್ಲಿ ಗಾಂಜಾ ವ್ಯಸನಕ್ಕೆ ಸಂಬಂಧಿಸಿದ ಪೊಟ್ಟಣಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಆದರೆ, ಈ ವಿಚಾರವಾಗಿ ಪೊಲೀಸರು ಇನ್ನೂ ಖಚಿತಪಡಿಸಿಲ್ಲ.
ಆರೋಪಿ ಅನೂಪ್ ಶೆಟ್ಟಿ ಗೋವಾದಲ್ಲಿ ಮೊದಲೇ ರೂಂ ಬುಕ್ ಮಾಡಿದ್ದಾನೆ ಎಂದಾದರೆ, ತನ್ನ ಫೈನಾನ್ಸ್ ಪಾಲುದಾರ ಅಜೇಂದ್ರನ ಕೊಲೆ ಪೂರ್ವ ನಿಯೋಜಿತವಾಗಿತ್ತೇ? ಎನ್ನುವ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಲು ಮೊದಲೇ ತಯಾರಿ ನಡೆಸಿ ಬಳಿಕ ಅಜೇಂದ್ರ ಅವರ ನೋಂದಣಿಯಾಗದ ಕಾರಿನಲ್ಲಿ ಗೋವಾಕ್ಕೆ ಪರಾರಿಯಾಗಿರಬಹುದು ಎನ್ನಲಾಗುತ್ತಿದೆ.
ಇನ್ನು ಅನೂಪ್ ಪರಾರಿಯಾಗುವ ಮುನ್ನ ಅಜೇಂದ್ರ ಅವರ ಕುತ್ತಿಗೆಯಲ್ಲಿದ್ದ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರವನ್ನು ಕೊಂಡೊಯ್ದಿದ್ದು, ಅದನ್ನು ಗೋವಾದಲ್ಲಿ ಮಾರಾಟ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆಯಷ್ಟೇ ಅಜೇಂದ್ರ ಅವರು ಕಾರೊಂದನ್ನು ಖರೀದಿಸಿದ್ದರು. ಅಲ್ಲದೇ, ಬ್ಯಾಂಕ್ ಸಾಲ ಮಾಡಿ ಅಣ್ಣನಿಗೆ ಟಿಪ್ಪರ್ ಕೂಡಾ ತೆಗೆದುಕೊಟ್ಟಿದ್ದರು. ಇದರೊಂದಿಗೆ ಫೈನಾನ್ಸ್ ವ್ಯವಹಾರದಲ್ಲಿ ಫಂಡ್ ಅನ್ನು ಹೊಸದಾಗಿ ಪ್ರಾರಂಭಿಸಿದ್ದರು. ಇದರಲ್ಲಿ ಅನೂಪ್ ಶೆಟ್ಟಿ ತನಗೆ ಪಾಲು ನೀಡಬೇಕು ಎಂದು ಕೇಳಿದ್ದು, ಇದಕ್ಕೆ ಅಜೇಂದ್ರ ಪಾಲು ನೀಡುವುದಿಲ್ಲ ಎಂದಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಕೋಪಗೊಂಡ ಅನೂಪ್ ಈ ಕೃತ್ಯ ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಈ ವಿಶೇಷ ತಂಡದಲ್ಲಿ ಶ್ರೀಧರ್ ನಾಯ್ಕ ಪಿ.ಎಸ್.ಐ. , ನಂಜನಾಯ್ಕ ಪಿ.ಎಸ್.ಐ. ಗಂಗೊಳ್ಳಿ, ಕುಂದಾಪುರ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ನಿರಂಜನ ಗೌಡ ಅವರೊಂದಿಗೆ ಉಪವಿಭಾಗದ ಸಿಬ್ಬಂದಿಯವರಾದ ಮೋಹನ, ಚಂದ್ರಶೇಖರ, ನಾಗೇಂದ್ರ, ಶ್ರೀನಿವಾಸ, ಸಂತೋಷ್ ಕುಮಾರ್, ಸಂತೋಷ್, ರಾಘವೇಂದ್ರ, ರಾಮು, ಸೀತಾರಾಮ, ಸತೀಶ್, ಚಿದಾನಂದ, ಮಧುಸೂಧನ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಸಹಕರಿಸಿದ್ದಾರೆ.