ಕಾರ್ಕಳ, ಆ. 01 (DaijiworldNews/SM): ತಾಯಿ ಹಾಗೂ ಮಗು ಶವವಾಗಿ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಇಲ್ಲಿನ ಮಡಿವಾಳಕಟ್ಟೆಯಲ್ಲಿ ರವಿವಾರ ಬೆಳಕಿಗೆ ಬಂದಿದೆ. ಕೆರ್ವಾಶೆ ಗ್ರಾಮದ ಕಡ್ಪಾಲ್ ನಿವಾಸಿಗಳಾದ ಸೌಮ್ಯ(37) ಹಾಗೂ ಅವರ ಮಗ ಆರೂಷ್(3) ಮೃತಪಟ್ಟವರು.
ಸೌಮ್ಯಳು ಸುಮಾರು 7 ದಿನಗಳಿಂದ ಕೆರ್ವಾಶೆಯ ಶಾಲೆಯ ಬಳಿ ಟೈಲರಿಂಗ್ ಕೆಲಸವನ್ನು ಕಲಿಯಲು ಹೋಗುತ್ತಿದ್ದರು. ಜುಲಾಯಿ 31ರ ಮಧ್ಯಾಹ್ನ 1.30ಕ್ಕೆ ಎಂದಿನಂತೆ ಟೈಲರಿಂಗ್ ಕಲಿಯಲೆಂದು ಮನೆಯಿಂದ ಹೊರಟು ಹೋಗಿರುವಾಗ ತನ್ನ ಮಗ ಆರೂಷ್ನನ್ನು ಕರೆದುಕೊಂಡು ಹೋಗಿದ್ದರು. ಸಂಜೆ 6.30 ಸಮಯವಾದರೂ ಅವರಿಬ್ಬರು ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಗಾಬರಿಗೊಂಡ ಸೌಮ್ಯಳ ತಂಗಿ ಸರಿತಾ ಅವರಿಬ್ಬರನ್ನು ಹುಡುಕುತ್ತಾ ಹೋದಾಗ ಮಡಿವಾಳಕಟ್ಟೆಯ ಕೆರೆಯ ನೀರಿನಲ್ಲಿ ಆರೂಷ್ ಧರಿಸಿದ ಚಪ್ಪಲಿ ನೀರಿನಲ್ಲಿ ತೇಲಾಡುತ್ತಿತ್ತು.
ಈಜುಪಟುಗಾರರಾದ ಚಂದ್ರ ಸಾಲಿಯಾನ್, ಮಯ್ಯದ್ಧಿ, ಭರತ್ ಎಂಬವರು ಆ ಕೆರೆಯ ನೀರಿನಲ್ಲಿ ಮುಳುಗಿ ಹುಡುಕಾಡಿದಾಗ ಸೌಮ್ಯ ಹಾಗೂ ಆರೂಷ್ ಅವರಿಬ್ಬರ ಮೃತದೇಹ ಪತ್ತೆಯಾಗಿ ಮೇಲಕ್ಕೆತ್ತಿದ್ದಾರೆ. ಕೆರೆಯ ಬದಿಯಲ್ಲಿರುವ ದಾರಿ ಮೂಲಕ ಅವರ ಮನೆಯ ಕಡೆಗೆ ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸುದಾಖಲಾಗಿದೆ.