ಮಂಗಳೂರು, ಆ 01 (DaijiworldNews/PY): "ರಾಜ್ಯದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾದ ಮೊದಲ ಅಲೆಯಿಂದ ಸರ್ಕಾರ ಪಾಠ ಕಲಿಯಬೇಕಿತ್ತು. ಆದರೆ, ಎರಡನೇ ಅಲೆ ಬಂದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಜನರು ಈಗ ಮೂರನೇ ಅಲೆಯ ಭೀತಿಯಲ್ಲಿದ್ದಾರೆ. ಬೆಂಗಳೂರಿನ ಬಳಿಕ ಮಂಗಳೂರು ರಾಜ್ಯದಲ್ಲೇ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸುಧಾರಿತ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದರೂ ಕೂಡಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಲ್ಲದೇ, ಜಿಲ್ಲೆಯಲ್ಲಿ ಲಸಿಕೆ ಪೂರೈಕೆ ಕೂಡಾ ಕಡಿಮೆ ಇದ್ದು, ಸರ್ಕಾರವೇ ಇದಕ್ಕೆ ನೇರ ಹೊಣೆ" ಎಂದು ಆರೋಪಿಸಿದ್ದಾರೆ.
"ಮಾಜಿ ಸಿಎಂ ಯಡಿಯೂರಪ್ಪ ಅವರು ಅಧಿಕಾರದಿಂದ ಹೊರಬಂದಾಗ ಅವರಿಗೆ ಹೈಕಮಾಂಡ್ನಿಂದ ಅಷ್ಟು ಬೆಂಬಲ ಸಿಕ್ಕಿಲ್ಲ ಎಂದು ಹೇಳುತ್ತಾ ಅಳುತ್ತಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಬಿಜೆಪಿಗರೇ ಆರೋಪಿಸುತ್ತಿದ್ದಾರೆ" ಎಂದಿದ್ದಾರೆ.
"ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಕೇವಲ ಹೆಸರಿಗೋಸ್ಕರ. ಪ್ರವಾಹದಿಂದ ತೀವ್ರವಾಗಿ ಸಂಕಷ್ಟಕ್ಕೊಳಗಾದ ಜನರ ಸಮಸ್ಯೆಗಳನ್ನು ಪರಿಹರಿಸದೇ ಸಿಎಂ ಬೊಮ್ಮಾಯಿ ವಾಪಾಸ್ಸಾಗಿದ್ದಾರೆ" ಎಂದು ದೂರಿದ್ದಾರೆ.
"ಯಡಿಯೂರಪ್ಪ ಅವರ ಸರ್ಕಾರದ ಎರಡು ವರ್ಷದ ಸಾಧನೆಯೇ ಭ್ರಷ್ಟಾಚಾರ. ಈ ನಡುವೆ ಲಸಿಕೆಯ ಸಮಸ್ಯೆಯನ್ನು ಸಿಎಂ ಬೊಮ್ಮಾಯಿ ನೇತೃತ್ಯವದ ಸರ್ಕಾರ ಪರಿಹರಿಸುವುದೇ?" ಎಂದು ಪ್ರಶ್ನಿಸಿದ್ದಾರೆ.