ಬ್ರಹ್ಮಾವರ, ಜು.31 (DaijiworkldNews/HR): ದೇವಸ್ಥಾನದಿಂದ ಹಾಗೂ ಮನೆಯಿಂದ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕಲ್ಲುಕಟ್ಟೆಯ ಗೋಪಾಲ (26), ಕೊಕ್ಕರ್ಣೆ ಜಾರುಜೆಡ್ಡುವಿನ ಅರುಣ್(26), ರವಿ ಕುಮಾರ್(28), ಸಾಸ್ತಾನ ಗುಂಡ್ಮಿಯ ರಜಾಕ್(41) ಎಂದು ಗುರುತಿಸಲಾಗಿದೆ.
ಕೋಟದ ನೆಂಚಾರು ಗ್ರಾಮದ ಕರಬರಬೆಟ್ಟು ಎಂಬಲ್ಲಿ ನೀಲಕಂಠ ಕರಬ ಎಂಬವರ ಮನೆಗೆ ನುಗ್ಗಿದ ಕಳ್ಳರು 38,200 ರೂ. ಮೌಲ್ಯದ ಸೊತ್ತುಗಳನ್ನು ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮದ ಹ್ರಬ್ಬಾಡಿ ಮೂಲ ಜಟ್ಟಿಗ ಮತ್ತು ಬ್ರಹ್ಮ ದೈವಸ್ಥಾನದ ಕಂಚಿನ ಘಂಟೆಗಳು ಮತ್ತು ತೂಕಳಕಗಳು ಕಳವು ಆಗಿರುವ ಬಗ್ಗೆ ಜು.29ರಂದು ಕೋಟ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಕಳವು ಮಾಡಿದ ದೇವಸ್ಥಾನದ ಘಂಟೆಗಳು, ದೀಪಗಳು ಹಾಗೂ ಇತರ ಪೂಜಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.