ಉಡುಪಿ, ಜು.31 (DaijiworkldNews/HR): ಜಿಲ್ಲೆಯಲ್ಲಿ ಎರಡನೆಯ ಅಲೆ ಇನ್ನೂ ಮುಕ್ತಾಯ ಆಗಿಲ್ಲ. ಜನರಲ್ಲಿ ಕೊರೊನಾ ಹೋಗಿದೆ ಎಂಬ ಭಾವನೆ ಬೇಡ" ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ಜೊತೆ ಮಾತನಾಡಿದ್ದು, ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸಲಾಗುವುದು. ಜವಾಬ್ದಾರಿ ಸ್ಥಾನದಲ್ಲಿರುವವರು ಮೊದಲು ಸೂಚನೆ ಅನುಸರಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕೊರೋನಾ ಮಾರ್ಗಸೂಚಿಯನ್ನು ಪಾಲಿಸಿ ಜನಕ್ಕೆ ಮಾದರಿಯಾಗಬೇಕು. ಜೊತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೊರೊನಾ ಮಾರ್ಗಸೂಚಿ ಪಾಲಿಸಬೇಕು" ಎಂದಿದ್ದಾರೆ.
ಇನ್ನು "ಉಡುಪಿ ಜಿಲ್ಲೆಯಾದ್ಯಂತ 1ತಿಂಗಳಿನಿಂದ ಪ್ರತಿದಿನ 100 ಪಾಸಿಟಿವ್ ಕೇಸ್ ಬರುತ್ತಿದ್ದು, ಜಿಲ್ಲೆಯ ಪಾಸಿಟಿವಿಟಿ ರೇಟ್ 3 ಶೇಕಡಾ ಆಸುಪಾಸಿನಲ್ಲಿದೆ. ಎರಡು ಮೂರು ದಿನದಿಂದ ಶೇಕಡಾ 5 ಪಾಸಿಟಿವಿಟಿ ರೇಟ್ ಬರುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದ ಜೊತೆ ಉಡುಪಿ ಸಂಪರ್ಕದಲ್ಲಿರುವ ಜಿಲ್ಲೆ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದ್ದರೂ ಕಾರ್ಯಕ್ರಮಗಳು ನಡೆಯುತ್ತಿದೆ. ಬೇರೆಬೇರೆ ಕಾರ್ಯಕ್ರಮ ಮಾಡುವವರೇ ಮೂರನೇ ಅಲೆಯ ಆಹ್ವಾನಕ್ಕೆ ಕಾರಣ ಆಗುತ್ತಾರೆ" ಎಂದು ಹೇಳಿದ್ದಾರೆ.