ಮಣಿಪಾಲ, ಜು 31 (DaijiworldNews/PY): ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಗೆ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ ಟ್ರಸ್ಟ್ ಮುಂಬೈನಿಂದ ಕೊಡಲ್ಪಡುವ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಕಾರ್ಯಕ್ಷಮತೆ ಶ್ರೇಷ್ಠತೆ (ಪರ್ಫಾರ್ಮೆನ್ಸ್ ಎಕ್ಸಲೆನ್ಸ್) ಪ್ರಶಸ್ತಿ 2020” ಲಭಿಸಿದೆ.
ಆರೋಗ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆಗೆ ಈ ಪ್ರಶಸ್ತಿ ದೊರೆತಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ (ಎಂಇಎಂಜಿ) ಯ ಮುಖ್ಯಸ್ಥರಾದ ಡಾ. ರಂಜನ್ ಆರ್ ಪೈ ಅವರು ಟ್ರೋಫಿ, ಪ್ರಶಸ್ತಿ ಮತ್ತು ಪ್ರಮಾಣಪತ್ರವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿಗಳಾದ ಸಿ ಜಿ ಮುತ್ತಣ್ಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರಿಗೆ ಇಂದು ಹಸ್ತಾಂತರಿಸಿದರು.
ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುಧರ್ಶನ್ ಬಲ್ಲಾಳ್, ಮಾಹೆ ಮಣಿಪಾಲದ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ ವಿಭಾಗ) ಗಳಾದ ಡಾ. ಪಿ ಎಲ್ ಎನ್ ಜಿ ರಾವ್, ಕುಲಸಚಿವ ಡಾ. ನಾರಾಯಣ ಸಭಾಹಿತ್, ಕೆ ಎಂ ಸಿ ಡೀನ್ ಡಾ. ಶರತ್ ಕೆ ರಾವ್,ಕಸ್ತೂರ್ಬಾ ಆಸ್ಪತ್ರೆಯ ಗುಣಮಟ್ಟ ಅನುಷ್ಠಾನದ ಸಲಹೆಗಾರ ಡಾ. ಸುನೀಲ್ ಸಿ ಮುಂಡ್ಕೂರ್ ಉಪಸ್ಥಿತರಿದ್ದರು.
ಈ ಪ್ರಶಸ್ತಿಯೊಂದಿಗೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಗುಣಮಟ್ಟ ಮತ್ತು ಮಾನ್ಯತೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ. ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಯು ದೇಶದ ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಗಳಲ್ಲಿ ಒಂದಾಗಿದೆ. ಈ ಪ್ರಶಸ್ತಿಗಳನ್ನು ಐಎಂಸಿಯ ಮಾಜಿ ಅಧ್ಯಕ್ಷರು ಮತ್ತು ಪ್ರಮುಖ ಕೈಗಾರಿಕೋದ್ಯಮಿಯಾಗಿದ್ದ ದಿ. ರಾಮಕೃಷ್ಣ ಬಜಾಜ್ ಅವರ ಹೆಸರಿನಲ್ಲಿ ನೀಡಲಾಗುತ್ತದೆ. ಪ್ರಶಸ್ತಿ ಪ್ರಕ್ರಿಯೆಯು ಕಠಿಣ ತರಬೇತಿ ಮತ್ತು ಮೌಲ್ಯಮಾಪನ ಕ್ರಮದ ಮೂಲಕ ನಡಸಲಾಗುತ್ತದೆ.
ಮಾಹೆ ಮಣಿಪಾಲದ ಎಲ್ಲಾ ಉನ್ನತ ಅಧಿಕಾರಿಗಳು ಈ ಪ್ರತಿಷ್ಠಿತ ಪ್ರಶಸ್ತಿ ದೊರಕಲು ಕಾರಣವಾದ ಕಸ್ತೂರ್ಬಾ ಆಸ್ಪತ್ರೆ ತಂಡವನ್ನು ಅಭಿನಂದಿಸಿದರು.
ಈ ಪ್ರಶಸ್ತಿಯನ್ನು ಕಸ್ತೂರ್ಬಾ ಆಸ್ಪತ್ರೆಗೆ ಸಾಮಾಜಿಕ ಜವಾಬ್ದಾರಿ, ನೈತಿಕ ಮತ್ತು ಪಾರದರ್ಶಕ ಆರೋಗ್ಯ ಸೇವೆ, ಕ್ರಿಯಾತ್ಮಕ ನಾಯಕತ್ವ, ರೋಗಿಗಳ - ಕೇಂದ್ರಿತ ಸೇವೆ, ಉದ್ಯೋಗಿಗಳ ದೃಷ್ಟಿಕೋನ, ಅತ್ಯುತ್ತಮ ಸಂಶೋಧನೆ ಮತ್ತು ತಾಂತ್ರಿಕ ಪರಿಣತಿಯೊಂದಿಗೆ ಎಲ್ಲಾ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒಂದೇ ಸೂರಿನಡಿ ಒದಗಿಸುತ್ತಿರುವ ಅಂಶಗಳನ್ನು ಗಮನಿಸಿ ನೀಡಲಾಗಿದೆ. ಸಂಸ್ಥೆಯು ತನ್ನ ಒಟ್ಟು ಶಕ್ತಿಯ ಬಳಕೆಯಲ್ಲಿ ಶೇ. 8ರಷ್ಟು ನವೀಕರಿಸಬಹುದಾದ ಶಕ್ತಿಯಿಂದ ಪಡೆಯಲ್ಪಟ್ಟಿದೆಯೆಂದು ಖಚಿತಪಡಿಸಿದೆ. ಬದಲಾವಣೆಗಳನ್ನು ಸುಲಭವಾಗಿ ಅಳವಡಿಸಿಕೊಳ್ಳಲು, ವ್ಯವಸ್ಥೆಗಳನ್ನು ಮತ್ತು ಪ್ರಕ್ರಿಯೆಗಳನ್ನು ವಿನ್ಯಾಸಗೊಳಿಸಲು ಕಡಿಮೆ ಕಾರ್ಬನ್ ಬೆಳವಣಿಗೆಯ ನವೀನ ಚಿಂತನೆಗೆ ನವೀನ ಅಭ್ಯಾಸಗಳನ್ನು ಬಳಸುತ್ತದೆ. ಇದು ಕಸ್ತೂರ್ಬಾ ಆಸ್ಪತ್ರೆಯನ್ನು ಸಾಮಾಜಿಕವಾಗಿ ಜವಾಬ್ದಾರಿಯುತ ಆರೋಗ್ಯ ಸೇವೆ ಮತ್ತು ರಕ್ಷಣೆ ನೀಡುವ ಸಂಸ್ಥೆಯನ್ನಾಗಿ ಮಾಡಲು ಸಾಧ್ಯವಾಗಿಸಿದೆ.