ಮಂಗಳೂರು, ಜು 31 (DaijiworldNews/PY): "ವಿದ್ಯಾರ್ಥಿಗಳಿಗೆ ಬ್ಯಾಂಕ್ಗಳಿಂದ ಅರಿವು ಯೋಜನೆಯಡಿ ಶಿಕ್ಷಣ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಯುವಕರ ಕೌಶಲ್ಯ ಅಭಿವೃದ್ದಿಗಾಗಿ ಮುದ್ರಾ ಯೋಜನೆಯಡಿ ಸಮರ್ಪಕವಾಗಿ ಸಾಲ ಬಿಡುಗಡೆ ಮಾಡಲು ಆಗುತ್ತಿಲ್ಲ. ಜಿಲ್ಲಾಡಳಿತದ ಮೂಲಕ ವಿದ್ಯಾರ್ಥಿಗಳು ಹಾಗೂ ಯುವಕರು ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು" ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅರಿವು ಯೋಜನೆ ಸ್ಥಗಿತಗೊಂಡ ಬಳಿಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್ಗಳನ್ನು ಪಡೆಯಲು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಿರಿಯ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ಕರೆದು ಈ ಸಮಸ್ಯೆಯನ್ನು ಪರಿಹರಿಸಬೇಕು. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಯ ಬಗ್ಗೆ ಗೊಂದಲವಿದೆ. ಸರ್ಕಾರಿ ಶಾಕಾಳಿಗೆ ಸೇರಲು ಇಚ್ಛಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಪೋಷಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ವಿದ್ಯಾರ್ಥಿಗಳಿಗೆ ಕಾನೂನಾತ್ಮಕವಾಗಿ ಮಾರ್ಗದರ್ಶನ ನೀಡಲು ಕಾಂಗ್ರೆಸ್ ಸಮಿತಿಯನ್ನು ರಚಿಸಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು" ಎಂದಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಖಾದರ್, "ರಾಜ್ಯದಲ್ಲಿನ ಸರ್ಕಾರದ ಅಸ್ತಿತ್ವವನ್ನು ಜನರು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ, ಆಡಳಿತ ನಿಷ್ಕ್ರಿಯವಾಗಿದೆ" ಎಂದು ಹೇಳಿದ್ದಾರೆ.
"ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿದ್ದ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ಅವರ ಪಕ್ಷದ ಸಚಿವರುಗಳೇ ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರವನ್ನು ಕೂಡಾ ಬರೆಯಲಾಗಿದೆ. ಬಿಎಸ್ವೈ ಅವರ ಹೆಸರು ಕೆಡಿಸಲು ಅವರ ಪಕ್ಷದ ನಾಯಕರೇ ಮುಂಚೂಣಿಯಲ್ಲಿದ್ದಾರೆ" ಎಂದಿದ್ದಾರೆ.
"ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿವೆ. ರಾಜ್ಯದ ಜಿಎಸ್ಟಿ ಪಾಲು ಹಾಗೂ ಪರಿಹಾರ ಮೊತ್ತವನ್ನು ಪಡೆದಿಲ್ಲ. ಇದಕ್ಕೆ ಸಂಸದರು ನೇರ ಹೊಣೆ" ಎಂದು ಆರೋಪಿಸಿದ್ದಾರೆ.
"ಬೈಕಂಪಾಡಿಯಲ್ಲಿ ಎಪಿಎಂಸಿಯಲ್ಲಿ ಹಣ್ಣಿನ ಮಾರುಕಟ್ಟೆ ನಿರ್ಮಿಸುವ ಕಾರ್ಯ ವಿಫಲವಾಗಿದೆ. ಸರ್ಕಾರ ರೈತರ ಹಣವನ್ನು ಈ ರೀತಿಯಾಗಿ ವ್ಯರ್ಥ ಮಾಡಬಾರದು. ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ವರದಿ ಕೇಳಬೇಕು. ಉನ್ನತ ಮಟ್ಟದ ಸಮಿತಿಯು ಈ ಬಗ್ಗೆ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದ್ಧಾರೆ.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ಈಶ್ವರ್ ಉಳ್ಳಾಲ್, ದಿನೇಶ್ ಕುಂಪಲ, ದೇವಾನಂದ ಶೆಟ್ಟಿ ಮತ್ತು ಇತರರು ಹಾಜರಿದ್ದರು.