ಕಾಸರಗೋಡು, ಜು 31(DaijiworldNews/MS): ಕುಂಬಳೆ ಆರಿಕ್ಕಾಡಿ ಕಾರ್ಲೆಯ ಸಮೀರ್ (25) ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಸಜೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಫು ನೀಡಿದೆ.
ಕುಂಬಳೆ ಉಜಾರು ಉಳುವಾರಿನ ಅಬ್ದುಲ್ ಲತೀಫ್ ಯಾನೆ ಓನಂದ ಲತೀಫ್ (44) ಗೆ ಶಿಕ್ಷೆ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಒಂದು ವರ್ಷ ಅಧಿಕ ಸಜೆ ವಿಧಿಸಲಾಗುವುದು. 2008 ರ ನವಂಬರ್ 9ರಂದು ರಾತ್ರಿ ಕೊಲೆ ನಡೆದಿತ್ತು. ಬಂಬ್ರಾಣ ಪೇಟೆಯ ಜಂಕ್ಷನ್ ನಲ್ಲಿ ಕಾರಿನಲ್ಲಿ ಬಂದ ತಂಡವು ಸಮೀರ್ ನನ್ನು ಇರಿದು ಕೊಲೆ ಗೈದಿದ್ದರು. ಲತೀಫ್ ಅಲ್ಲದೆ ಕರ್ನಾಟಕ ಬೆಳಗಾವಿಯ ಸಂತೋಷ್ ಸಿಂಗ್, ಮಂಜೇಶ್ವರ ಕೂಳೂರಿನ ಮುಹಮ್ಮದ್ ಹನೀಫ್ ಕೃತ್ಯದಲ್ಲಿ ಶಾಮೀಲಾಗಿದ್ದು, ಇಬ್ಬರು ವಿಚಾರಣೆ ವೇಳೆ ಹಾಜರಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ಇವರಿಬ್ಬರ ಮೇಲಿನ ಪ್ರಕರಣ ನ್ಯಾಯಾಲಯ ವಿಚಾರಣೆಗಾಗಿ ಮುಂದೂಡಿದೆ. ಓರ್ವ ಆರೋಪಿ ಈ ಹಿಂದೆ ಮೃತಪಟ್ಟಿದ್ದನು
ಅಂದು ಕುಂಬಳೆ ಸಿ ಐ ಆಗಿದ್ದ ಕೆ ದಾಮೋದರನ್ ಈ ಕೊಲೆ ಪ್ರಕರಣದ ದೋಷಾರೋಪ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಒಟ್ಟು 28 ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತ್ತು. 40 ದಾಖಲೆ ಪತ್ರಗಳನ್ನು ಹಾಗೂ 11 ವಸ್ತು ಪುರಾವೆಗಳನ್ನು ನ್ಯಾಯಾಲಯಕ್ಕೆ ದಾಖಲಿಸಿದ್ದರು. ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಧೀಶರಾದ ಎ.ವಿ ಉಣ್ಣಿಕೃಷ್ಣನ್ ರವರು ಈ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಹೆಚ್ಚುವರಿ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ . ಬಾಲಕೃಷ್ಣನ್ ರವರು ವಾದಿಸಿದ್ದರು.