ಕಾಸರಗೋಡು, ಜು. 30 (DaijiworldNews/SM): ವ್ಯಾಕ್ಸಿನ್ ಗೆ ಸಂಬಂಧಪಟ್ಟಂತೆ ಮಾತಿನ ಚಕಮಕಿ ಘರ್ಷಣೆಗೆ ತಿರುಗಿದ ಘಟನೆ ಶುಕ್ರವಾರ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯವರಿಗೆ ವ್ಯಾಕ್ಸಿನ್ ನೀಡಿಕೆ ಕುರಿತ ವಾಗ್ವಾದ ಘರ್ಷಣೆಗೆ ಕಾರಣವಾಗಿದೆ. ಮೊಗ್ರಾಲ್ ಪುತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಪಂಚಾಯತ್ ನ ಮೊದಲ ಮತ್ತು ಎರಡನೇ ವಾರ್ಡಿನವರಿಗೆ ಶುಕ್ರವಾರ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿತ್ತು.
ಈ ನಡುವೆ ಹೊರ ವಾರ್ಡಿನವರು ವ್ಯಾಕ್ಸಿನ್ ಪಡೆಯಲು ಬಂದಿದ್ದಾರೆ ಎಂಬ ಬಗ್ಗೆ ಘರ್ಷಣೆ ನಡೆದಿದೆ. ಆರೋಗ್ಯ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಕಾಸರಗೋಡು ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಗುರುವಾರ ನಡೆದ ಗ್ರಾಮ ಪಂಚಾಯತ್ ಸಲಹಾ ಸಮಿತಿ ಸಭೆಯಲ್ಲಿ ಎರಡು ವಾರ್ಡಿನವರಿಗೆ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಶುಕ್ರವಾರ ಹೊರಗಿನವರಿಗೆ ವ್ಯಾಕ್ಸಿನ್ ನೀಡಿದ್ದನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಘರ್ಷಣೆ ಉಂಟಾಗಿದೆ. ಘರ್ಷಣೆಯ ಹಿನ್ನಲೆಯಲ್ಲಿ ಗಂಟೆಗಳ ಕಾಲ ವ್ಯಾಕ್ಸಿನ್ ನೀಡಿಕೆ ಸ್ಥಗಿತಗೊಂಡಿತ್ತು. ಬಳಿಕ ಪೊಲೀಸರ ಭದ್ರತೆಯಲ್ಲಿ ವ್ಯಾಕ್ಸಿನ್ ಪುನರಾರಂಭಗೊಂಡಿತು.