ಕಾಸರಗೋಡು, ಜು. 30 (DaijiworldNews/SM): ನಾಮಪತ್ರ ಹಿಂಪಡೆಯಲು ಬಿ ಎಸ್ಪಿ ಅಭ್ಯರ್ಥಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರೈಂ ಬ್ರಾಂಚ್ ತನಿಖಾ ತಂಡ ತನಿಖೆ ಚುರುಕುಗೊಳಿಸಿದ್ದು, ಯುವ ಮೋರ್ಚಾ ರಾಜ್ಯ ನಾಯಕ ಸುನಿಲ್ ನಾಯ್ಕ್ ನನ್ನು ಶುಕ್ರವಾರ ವಿಚಾರಣೆ ನಡೆಸಿದೆ.
ಕಾಸರಗೋಡು ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಬಿ.ಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರವರ ತಾಯಿ ಕೂಡ ವಿಚಾರಣೆ ವೇಳೆ ಹಾಜರಾಗಿದ್ದರು. ಹಣ ನೀಡಿದ್ದು ಸುನಿಲ್ ನಾಯ್ಕ್ ಎಂದು ಸುಂದರರ ತಾಯಿ ಗುರುತು ಪತ್ತೆ ಹಚ್ಚಿದ್ದಾರೆ. ಮಾರ್ಚ್ 21ರಂದು ಬಿಜೆಪಿ ಮುಖಂಡರು ಮನೆಗೆ ತಲುಪಿ ಹಣ ನೀಡಿದ್ದಾಗಿ ಸುಂದರ ರವರ ತಾಯಿ ತನಿಖಾ ತಂಡದ ಮುಂದೆ ಸ್ಪಷ್ಟಪಡಿಸಿದ್ದಾರೆ.
ವಿಚಾರಣೆ ವೇಳೆ ತಾನು ಸುಂದರರ ಮನೆಗೆ ಹೋಗಿಲ್ಲ.ಹಣ ನೀಡಿಲ್ಲ ಎಂದು ಸುನಿಲ್ ನಾಯ್ಕ್ ಹೇಳಿಕೆ ನೀಡಿದ್ದು , ಇದರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ಸುಂದರ ರವರ ತಾಯಿ ಯನ್ನು ಕರೆಸಲಾಗಿತ್ತು. ಈ ಸಂದರ್ಭದಲ್ಲಿ ಸುನಿಲ್ ನಾಯ್ಕ್ ಹಣ ನೀಡಿದ್ದಾಗಿ ಹೇಳಿಕೆ ನೀಡಿದ್ದಾರೆ ಎರಡು ಗಂಟೆಗೂ ಅಧಿಕ ಸಮಯ ಸುನಿಲ್ ನಾಯ್ಕ್ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಹೆಚ್ಚಿನ ಮಾಹಿತಿ ಕಲೆ ಹಾಕಲು ಮತ್ತೆ ಸುನಿಲ್ ನಾಯ್ಕ್ ನನ್ನು ವಿಚಾರಣೆಗೆ ಕ್ರೈಂ ಬ್ರಾಂಚ್ ಕರೆಸಿಕೊಳ್ಳುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಣಿಕಂಠ ರೈ ಸೇರಿದಂತೆ ಹಲವರಿಂದ ಈ ಹಿಂದೆ ಮಾಹಿತಿ ಕಲೆ ಹಾಕಲಾಗಿತ್ತು.
ಏಪ್ರಿಲ್ ನಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿ ಎಸ್ಪಿ ಅಭ್ಯರ್ಥಿಯಾಗಿದ್ದ ಕೆ . ಸುಂದರ ರವರ ನಾಮಪತ್ರ ಹಿಂದಕ್ಕೆ ಪಡೆಯಲು ಬಿಜೆಪಿ ಮುಖಂಡರು ಎರಡು ಲಕ್ಷ ರೂಪಾಯಿ ನಗದು ಹಾಗೂ ಸ್ಮಾರ್ಟ್ ಫೋನ್ ಮತ್ತು ಹಲವು ಆಮಿಷಗಳನ್ನು ನೀಡಿದ್ದರು. ಈ ಬಗ್ಗೆ ಕೆ. ಸುಂದರ ಚುನಾವಣೆ ಕಳೆದು ಒಂದು ತಿಂಗಳ ಬಳಿಕ ಬಹಿರಂಗಪಡಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದಂತೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಜೇಶ್ವರ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ವಿರುದ್ಧ ಈಗಾಗಲೇ ಮೊಕದ್ದಮೆ ದಾಖಲಿಸಲಾಗಿದೆ. ಆರಂಭದಲ್ಲಿ ಬದಿಯಡ್ಕ ಠಾಣಾ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿತ್ತು.