ಕಾರ್ಕಳ, ಜು.30 (DaijiworldNews/HR): ಜಾತ್ಯಾತೀತ ಸೋಗಿನಲ್ಲಿ ದೇಶದ ಸಂಸ್ಕೃತಿಯನ್ನು ಕಾಂಗ್ರೆಸ್ ನಾಶ ಮಾಡಿದೆ. ಭಾರತೀಯ ಜನತಾ ಪಾರ್ಟಿಯು ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಜೊತೆಗೆ ಅಭಿವೃದ್ಧಿ ಪಥದತ್ತ ಕೊಂಡುಹೊಯ್ಯುವಲ್ಲಿ ಶ್ರಮಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಹಿರ್ಗಾನ ನೆಲ್ಲಿಕಟ್ಟೆ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ಕಾರ್ಕಳ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಸಿ ಮಾತನಾಡಿದ ಅವರು, "ಭಾರತೀಯ ಜನಾತಾ ಪಾರ್ಟಿಯು ತಳಮಟ್ಟದಲ್ಲಿಯೇ ಸಂಘಟತ್ಮಾಕವಾಗಿ ಕಟ್ಟಿ ಬೆಳೆಸುವಲ್ಲಿ ಹಾಗೂ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿಗೆ ಕಟ್ಟಿಬದ್ಧರಾಗಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಇದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ದೊರಕಲಿದೆ. ಯುವಶಕ್ತಿಯೇ ರಾಷ್ಟ್ರಶಕ್ತಿ ಎಂದು ಪ್ರತಿಪಾದಿಸುವತ್ತಾ ಬಂದಿರುವು ಸ್ಥಳೀಯ ಶಾಸಕ ಸುನಿಲ್ ಕುಮಾರ್ ಕಾರ್ಯಸಾಧನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಮುಂಬರುವ ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಒಮ್ಮತದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುವಲ್ಲಿ ಬಿಜೆಪಿ ಮುಂದಾಗಲಿದೆ. ಅದಕ್ಕೆ ಕಾರ್ಯಕರ್ತರ ಸಹಮತ ಅಗತ್ಯವಾಗಿದೆ ಮನವಿ ಮಾಡಿಕೊಂಡರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, "ಕೊವೀಡ್ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ೨೦೦೪ರಿಂದ ಇಲ್ಲಿನ ತನಕ ಕಾರ್ಕಳದಲ್ಲಿ ಬಿಜೆಪಿ ಬಲಿಷ್ಠಗೊಂಡಿದ್ದು, ಪಕ್ಷ ಬಲವರ್ಧನೆಯಲ್ಲಿ ಕಾರ್ಯಕರ್ತರ ಶ್ರಮ ಅಪಾರ" ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಮಣಿರಾಜ ಶೆಟ್ಟಿ, ಸವಿತಾ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್, ರೇಷ್ಮಾ ಶೆಟ್ಟಿ, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್ ಸಾಲ್ಯಾನ್, ನವೀನ್ ನಾಯಕ್ ಉಪಸ್ಥಿತರಿದ್ದರು.
ಮಂಡಲ ಕಾರ್ಯದರ್ಶಿ ಅನಂತಕೃಷ್ಣ ಶೆಣೈ ಸ್ವಾಗತಿಸಿದರು. ಕುಕ್ಕುಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಮಿತ್ ಶೆಟ್ಟಿ ನಿರೂಪಿಸಿದರು. ಮಂಡಲ ಕಾರ್ಯದರ್ಶಿ ಶಂಕರ್ ಕುಂದರ್ ಧನ್ಯವಾದ ಸಲ್ಲಿಸಿದರು. ಸಭೆಯಲ್ಲಿ ವಿವಿಧ ಶಕ್ತಿ ಕೇಂದ್ರಗಳ ಪದಾಧಿಕಾರಿಗಳು ಭಾಗವಹಿಸಿದ್ದರು.