ಉಡುಪಿ, ಜು 30 (DaijiworldNews/PY): "ಆರೋಗ್ಯ ಎಲ್ಲರಿಗೂ ಮುಖ್ಯ. ಆರೋಗ್ಯ ಉಚಿತವಾಗಿ ಕೊಡಬೇಕು. ಹೆರಿಗೆ ಬಂದ ಮಹಿಳೆಯರಿಗೆ ಮತ್ತು ಬಾಣಂತಿಯರಿಗೆ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಕರ್ಯವಿದೆ. ಆದರೆ ಅದನ್ನು ಸರಕಾರ ನಡೆಸುತ್ತಿಲ್ಲವೆಂದರೆ ದುರಾದೃಷ್ಟ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಉಡುಪಿಯ ಉಸ್ತುವಾರಿಯಾಗಿದ್ದು, ಅವರಿಗೆ ಇಲ್ಲಿ ಸ್ಥಿತಿ ಗೊತ್ತಿದೆ. ಜಿಲ್ಲೆಗೆ ಏನಾದರೂ ಕೊಡುಗೆ ಕೊಡುವುದಿದ್ದರೆ, ಈ ಆಸ್ಪತ್ರೆಯನ್ನು ದತ್ತು ಪಡೆದುಕೊಂಡು, ಎಲ್ಲಾ ಸೇವೆಯನ್ನು ಉಚಿತವಾಗಿ ನೀಡಲಿ" ಎಂದು ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆಗ್ರಹಿಸಿದರು.
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂದು ಖಂಡಿಸಿ ಜಿಲ್ಲಾ ಕಾಂಗ್ರೆಸ್ನ ಸದಸ್ಯರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದರು.
"ಈ ಹಿಂದೆ ಸರಕಾರದ ಜೊತೆಗೆ ಒಡಂಬಡಿಕೆ ಮಾಡಿತ್ತು. ಇದುವರೆಗೆ ಬಿ ಆರ್ ಶೆಟ್ಟಿಯವರು ಅಡಳಿತ ನಿರ್ವಹಣೆ ಮಡಿಕೊಂಡು ಬಂದಿದ್ದಾರೆ. ಆದರೆ ಆರ್ಥಿಕ ಸಂಕಷ್ಟದಿಂದ ಆಸ್ಪತ್ರೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸರಕಾರಕ್ಕೆ ಮನವಿ ಮಾಡಿದೆ. ಸರಕಾರ ಕೆಲವು ಅನಗತ್ಯ ಖರ್ಚುಗಳನ್ನು ಕಡಿತ ಮಾಡಿ ಇಂತಹ ಕೆಲಸಗಳಿಗೆ ಬಳಸಿಕೊಳ್ಳಬಹುದು" ಎಂದರು.
ಮುಖಂಡಅಮೃತ್ ಶೈಣೈ ಮಾತನಾಡಿ, "ಉಡುಪಿಯ ಶಾಸಕರು ಇಂದು ಸಂಜೆಯೇ ತುರ್ತುಸಭೆ ಮಾಡಿ, ನಾಳೆ ಆಸ್ಪತ್ರೆಯಲ್ಲಿ ಯಥಾಸ್ಥಿತಿ ನಡೆಯುವಂತೆ ಮಾಡಬೇಕು. ಇಲ್ಲಿನ ಶಾಸಕರು ಹಡಿಲು ಭೂಮಿಗೆ ೫ ಕೋಟಿ ರೂ. ಖರ್ಚು ಮಾಡುವ ಬದಲು ಇಲ್ಲಿನ ದಾದಿಯರ, ಸಹಾಯಕ ಸಿಬ್ಬಂದಿಗಳ ವೇತನವಾಗಿ ಕೊಟ್ಟಿದ್ದರೆ, ಕೊನೆಯ ಪಕ್ಷ ಸ್ಥಿತಿ ಹಣಕಾಸಿನ ಕೊರತೆ ನೀಗಿರುತ್ತಿತ್ತು. ನಾವು ಕೃಷಿಗೆ ವಿರೋಧಿಯಲ್ಲ. ಆದರೆ ಯಾವ ಕಾಲದಲ್ಲಿ ಏನು ಮಾಡಿದರೆ ಹೆಚ್ಚು ಸಮಂಜಸ ಎನ್ನುವ ಅರಿವು ಶಾಸಕರಿಗೂ ಇರಭೇಕು. ಈ ಸರಕಾರ ಬಾರ್ ಅಂಗಡಿ ಎಲ್ಲವನ್ನೂ ತೆರೆಯಲು ಅವಕಾಶ ಕೊಟ್ಟಿದೆ. ಆಡಳಿತ ಪಕ್ಷದ ದುರಾಡಳಿತವನ್ನು ವಿರೋಧ ಪಕ್ಷಗಳು ಟೀಕಿಸುತ್ತವೆ ಎನ್ನುವ ಕಾರಣಕ್ಕೆ ರಾಜಕೀಯ ಕಾರ್ಯಕ್ರಮಕ್ಕೆ ಆಕ್ಷೇಪವೆತ್ತಿದ್ದಾರೆ" ಎಂದು ಹೇಳಿದರು.
ಕೆಪಿಸಿಸಿ ಜಿಲ್ಲಾ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಮಾತನಾಡಿ, "ಇಲ್ಲಿ ಹೆರಿಗೆಗಾಗಿ ಬಂದ ಮಹಿಳೆಯರನ್ನು ವಾಪಾಸ್ಸು ಕಳುಹಿಸಿದ್ದಾರೆ. ಈಗ ಸರಕಾರವೇ ಮುನ್ನಡೆಸಬೇಕು. ಜಿಲ್ಲಾ ಉಸ್ತುವಾರಿಗಳು ಮುಖ್ಯಮಂತ್ರಿ ಸ್ಥಾನ ವಹಿಸಿದ್ದು, ಸಿಬ್ಬಂದಿಗಳ ವೇತನ ಸಮಸ್ಯೆನ್ನು ಕೂಡಲೇ ಪರಿಹರಿಸಬೇಕು. ಆರೋಗ್ಯ ಜನರ ಮೂಲಭೂತ ಸೌಕರ್ಯ. ಸಂಕಷ್ಟದ ಸಮಯದಲ್ಲಿ ಯಾರು ಖಾಸಗಿ ಆಸ್ಪತ್ರೆಗೆ ಹೋಗಲಾರದ ಸ್ಥಿತಿ ಎದುರಾಗಿದೆ. ಇಲ್ಲಿ ಸೇವೆ ಸಿಗದಿದ್ದರೆ ಜನ ಇನ್ನಲ್ಲಿ ಹೋಗಬೇಕು. ಸರಕಾರ ಈ ವಿಚಾರಕ್ಕೆ ಶೀಘ್ರ ಸ್ಪಂದಿಸಬೇಕು" ಎಂದರು.
ಈ ಸಂದರ್ಭ ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಮೊದಲಾದವರು ಉಪಸ್ಥಿತರಿದ್ದರು.