ಉಡುಪಿ, ಜು 30 (DaijiworldNews/MS): ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ಘೋಷಣೆ ಮತ್ತು ಸರ್ಮಪಣೆಯ 5 ನೇ ವರ್ಷಾಚರಣೆಯು ಆಗಸ್ಟ್ 1 ರಂದು ನಡೆಯಲಿದೆ. 2016 ರ ಆಗಸ್ಟ್ 1 ರಂದು ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರವನ್ನು ಮೈನರ್ ಬಸಿಲಿಕಾ (ಕಿರಿಯ ಮಹಾ ದೇವಾಲಯ) ಎಂದು ಘೋಷಿಸಲಾಗಿತ್ತು.
ಆಗಸ್ಟ್ 1 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆಗಿರುವ ಫಾದರ್ ವಾಲ್ಟರ್ ಡಿಮೆಲ್ಲೋ ಅವರು ಸಂಭ್ರಮದ ಬಲಿಪೂಜೆಯನ್ನು ಸಮರ್ಪಿಸಲಿದ್ದಾರೆ. ಆಗಸ್ಟ್ 1 ರಿಂದ ಆಗಸ್ಟ್ 9 ರವರೆಗೆ ಸಂತ ಲಾರೆನ್ಸ್ ರ ತಾರೀಕಿನ ಹಬ್ಬದ ಪೂರ್ವಭಾವಿಯಾಗಿ ನವದಿನಗಳ ನೊವೆನಾ ಪ್ರಾರ್ಥನೆಗಳು ಕೂಡಾ ನಡೆಯಲಿವೆ.
ಆಗಸ್ಟ್ 10 ರಂದು ಸಂತ ಲಾರೆನ್ಸ್ ರ ಹಬ್ಬವು ವಿಜೃಂಭಣೆಯಿಂದ ಜರಗಲಿದೆ. ಆಗಸ್ಟ್ 10 ರಂದು ಹಬ್ಬದ ಅಂಗವಾಗಿ ಬೆಳಿಗ್ಗೆ 10.30 ಗಂಟೆಗೆ ಸಂಭ್ರಮದ ಬಲಿಪೂಜೆಯು ಜರಗಲಿದ್ದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋರವರು ಹಬ್ಬದ ಬಲಿಪೂಜೆಯನ್ನು ಸಮರ್ಪಿಸಲಿದ್ದಾರೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಗಸ್ಟ್ 1 ರಂದು ನೊವೆನಾ ಪ್ರಾರ್ಥನೆಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಆಗಸ್ಟ್ 1 ರಿಂದ 9 ತಾರೀಕಿನವರೆಗೆ ಪ್ರತಿದಿನ 10 ಗಂಟೆಗೆ ನೊವೆನಾ ಪ್ರಾರ್ಥನೆ, ಜಪ, ಆರಾಧನೆಯು ನಡೆಯಲಿದ್ದು 11 ಗಂಟೆಗೆ ಬಲಿಪೂಜೆಯು ಜರಗಲಿದೆ. ಈ ಸಂಧರ್ಭದಲ್ಲಿ ಎಲ್ಲಾ ಭಕ್ತಾಧಿಗಳಿಗೆ ಪ್ರಸಾದವನ್ನು ಕೂಡಾ ವಿತರಿಸಲಾಗುವುದು. ಪವಾಡ ಪುರುಷ ಸಂತ ಲಾರೆನ್ಸ್ ರ ಭಿನ್ನಹದ ಮೂಲಕ ಈ ಕ್ಷೆತ್ರದಲ್ಲಿ ಹಲವಾರು ಪವಾಡಗಳು ನಡೆಯುತ್ತಲೇ ಇವೆ.
ಇತ್ತೀಚಿನ ವರ್ಷಗಳಲ್ಲಿ ಪುಣ್ಯಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳು ಕೂಡಾ ನಡೆಯುತ್ತಿವೆ.