ಕಾರ್ಕಳ, ಜು.30 (DaijiworldNews/HR): ಜಾನಪದ ಮತ್ತು ದೈವಾರಾಧನೆಯ ಕುರಿತು ಪಾಂಡಿತ್ಯಹೊಂದಿದ್ದ ಸಾಹಿತಿ, ಕವಿ, ಕನ್ನಡ ಉಪನ್ಯಾಸಕ ಕಾರ್ಕಳದ ಮರಿಣಾಪುರದ ಡಾ. ಸುರೇಶ್(47) ಅಲ್ಪ ಕಾಲದ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಮಸುಮಾ ಎಂಬ ಕಾವ್ಯನಾಮದೊಂದಿಗೆ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದ ಅವರು ಕಾದಂಬರಿ, ಕವನ, ಸಂಕಲನ, ಕತಾ ಸಂಕಲನದ ಬರೆಯುವ ಮೂಲಕ ಜನಜನಿತಾರಾಗಿದ್ದರು. ಇವರು ತಮ್ಮ ನೋವು, ಆಕ್ರೋಶಗಳನ್ನು ಕೆಲವೊಂದು ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯ ವಿರುದ್ಧ ಹೊರ ಹಾಕುತ್ತಿದ್ದ ಕುರಿತು ಮಾಧ್ಯಮಗಳು ಉಲ್ಲೇಖಿಸುತ್ತಿತ್ತು.
2019ರಲ್ಲಿ ಇವರು ಬರೆದ ತುಳುನಾಡಿನ ಸಂಸ್ಕೃತಿ ಸ್ವರೂಪ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿದ್ವಾವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. 2018ನೇ ಸಾಲಿನ ಶಿವರಾಮ ಕಾರಂತ ಪುರಸ್ಕಾರವನ್ನು ತಮ್ಮ ಬೂಬನ ಕಥೆಗಳು ಕಥಾ ಸಂಕಲನಕ್ಕೆ ಪಡೆದಿದ್ದರು.
ಮೂಲ್ಕಿಯ ವಿಜಯ ಕಾಲೇಜು, ಕಾರ್ಕಳದ ಎಂಪಿಎಂ ಕಾಲೇಜು, ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಳೆದ 15 ವರ್ಷಗಳ ಮಿಕ್ಕಿ ಕಾಲ ಸೇವೆ ಸಲ್ಲಿಸಿದ್ದರು.