ಬಂಟ್ವಾಳ,ಜು 30 (DaijiworldNews/MS): ಬೆಂಗಳೂರು ಮೂಲದ ವ್ಯಕ್ತಿಯೋರ್ವ ಪಾಣೆಮಂಗಳೂರು ಸೇತುವೆಯಲ್ಲಿ ಬೈಕನ್ನು ಚಲನಾ ಸ್ಥಿತಿಯಲ್ಲಿ ನಿಲ್ಲಿಸಿ ನಾಪತ್ತೆಯಾದ ಘಟನೆ ನಡೆದಿದೆ.
ಬೆಂಗಳೂರು ದಾಸರಹಳ್ಳಿ ಮೂಲದ ಸತ್ಯವೇಲು (29) ನಾಪತ್ತೆಯಾದ ಯುವಕ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಯುವಕ ಕಳೆದ 15 ದಿನಗಳ ಹಿಂದೆ ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಬಂದು ನದಿಗೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ್ದ. ಆದರೆ ಅಂದು ಸ್ಥಳೀಯರು ಆತನನ್ನು ರಕ್ಷಣೆ ಮಾಡಿ ತಿಳಿ ಹೇಳಿ ಬಳಿಕ ಬಂಟ್ವಾಳ ನಗರ ಪೊಲೀಸರು ಆತನ ಪೋಷಕರನ್ನು ಕರೆಸಿ ಕಳುಹಿಸಿಕೊಟ್ಟಿದ್ದರು.
ಆತನ ಬೈಕ್ ಇದೀಗ ಮತ್ತೆ ಪಾಣೆಮಂಗಳೂರು ಸೇತುವೆಯ ಮೇಲೆ ಕಂಡುಬಂದಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎ.ಎಸ್.ಐ ದೇವಪ್ಪ ಹಾಗೂ ಎಚ್ಸಿ ಸುರೇಶ ಪಡಾರ್ ಮಾಹಿತಿ ಪಡೆದು ಬೈಕನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
ಕೆಲಸಕ್ಕೆಂದು ತೆರಳಿದ ಆತ ಮನೆಗೆ ಹಿಂದಿರುಗದ ಕಾರಣ ಕರೆ ಮಾಡಿದಾಗ ಸ್ನೇಹಿತ ಮನೆಯಲ್ಲಿರುವುದಾಗಿ ತಿಳಿಸಿದ್ದಾನೆ. ಆದರೆ ಆ ಬಳಿಕವೂ ಹಿಂತಿರುಗದ ಕಾರಣ ಆತನ ನಾಪತ್ತೆಯ ಕುರಿತು ಬೆಂಗಳೂರಿನ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.