ಕುಂದಾಪುರ, ಜು.30 (DaijiworldNews/HR): ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗಬೇಕು ಎಂದು ಕೋಟ ಯುವಮೋರ್ಚ ಅಧ್ಯಕ್ಷ ಸುಶಾಂತ್ ಅಚ್ಲಾಡಿ ಮತ್ತು ಹಾಲಾಡಿ ಅಭಿಮಾನಿ ಬಳಗ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, "ಈ ಹಿಂದೆ ಮಾಡಿದ ತಪ್ಪನ್ನು ಬಿಜೆಪಿಗೆ ಈ ಬಾರಿ ತಿದ್ದಿಕೊಳ್ಳುವ ಅವಕಾಶ ಇವೆ. 1999 ರಿಂದ 5 ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಪ್ರತೀ ಬಾರಿ ಚುನಾವಣೆಯಲ್ಲಿ ಮತಗಳ ಅಂತರ ಅನ್ನುವುದು ದುಪ್ಪಟ್ಟು ಆಗುತ್ತಾ ಇರುತ್ತದೆ. ಯಾಕೆಂದರೆ ಅವರ ಮೇಲೆ ಒಂದು ಕಪ್ಪು ಚುಕ್ಕೆಯೂ ಇಲ್ಲ. ಯಾವುದೇ ಹಗರಣದಲ್ಲಿ ಇಲ್ಲ. ಹೆಚ್ಚಿನ ಶಾಸಕರು ರಾಜಧಾನಿಯಲ್ಲಿ ನೆಲೆ ನಿಂತಿದ್ದಾರೆ. ಆದರೆ ಹಾಲಾಡಿಯವರು ಮಾತ್ರ ಸಂಪುಟದಲ್ಲಿ ಸ್ಥಾನ ಪಡೆಯಲು ಯಾವುದೇ ಲಾಬಿ ಮಾಡುತ್ತಿಲ್ಲ. ಬೇಡಿಕೆಯನ್ನು ಇಟ್ಟಿಲ್ಲ. ಈಗ ಬಿಜೆಪಿ ಸರಕಾರವೇ ಇದೆ. ಹಾಗಾಗಿ ಹಾಲಾಡಿಯವರಿಗೆ ಸಚಿವ ಸ್ಥಾನ ಸಿಗಬೇಕಾದುದು ಹೆಚ್ಚು ಸೂಕ್ತ ಮತ್ತು ಅರ್ಹರು" ಎಂದಿದ್ದಾರೆ.
ಇನ್ನು "ಅವರು ಸಚಿವರಾಗಬೇಕೆಂಬುದು ಲಕ್ಷಾಂತರ ಅಭಿಮಾನಿಗಳ ಆಸೆ. ಸ್ಥಾನ ಕೊಟ್ಟರೆ ಕುಂದಾಪುರ ಸೇರಿದಂತೆ ಇಡೀ ಜಿಲ್ಲೆ ಅಭಿವೃದ್ಧಿ ಆಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹಾಲಾಡಿಯವರನ್ನು ಬೆಂಬಲಿಸಿ ಅಭಿಯಾನ ಈಗಾಗಲೇ ಆರಂಭವಾಗಿದೆ. ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿವರಿಗೆ ಮನವಿ ಸಲ್ಲಿಸಲಿದ್ದೇವೆ" ಎಂದು ಕೋಟ ಯುವಮೋರ್ಚ ಅಧ್ಯಕ್ಷ ಸುಶಾಂತ್ ಅಚ್ಲಾಡಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಯೋಗಿಶ್, ಕೀರ್ತಿಶ್ ಪೂಜಾರಿ ಕೋಟ, ತೀರ್ಥನ್ ದೇವಾಡಿಗ ವಡ್ಡರ್ಸೆ ಉಪಸ್ಥಿತರಿದ್ದರು.