ಬಂಟ್ವಾಳ, ಜು 29 (DaijiworldNews/PY): ಪಾಣೆಮಂಗಳೂರು ಹೊಸ ಸೇತುವೆಯಲ್ಲಿ ಬುಧವಾರ ಮಧ್ಯ ರಾತ್ರಿ ಬೈಕ್ ಚಾಲನೆಯಲ್ಲಿಟ್ಟು ಬೈಕ್ ಸವಾರ ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪ್ತತೆಯಾದ ಯುವಕನನ್ನು ಮೂಲತಃ ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ಎನ್ನಲಾಗಿದ್ದು, ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಈತ ಕೆಲಸ ಮಾಡುತ್ತಿದ್ದ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ದೊರೆತಿದೆ.
ಸುಮಾರು 15 ದಿನಗಳ ಹಿಂದೆ ಈತ ಇದೇ ರೀತಿಯಾಗಿ ನದಿಗೆ ಹಾರುವ ಸಲುವಾಗಿ ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಆಗಮಿಸಿದ್ದ. ಆತನನ್ನು ರಕ್ಷಿಸಿದ ಸ್ಥಳೀಯರು ನಂತರ ಬಂಟ್ವಾಳ ನಗರ ಪೊಲೀಸರು ಆತನ ಪೋಷಕರನ್ನು ಕರೆಸಿ ಕಳುಹಿಸಿಕೊಟ್ಟಿದ್ದರು.
ಜುಲೈ 28ರ ಬುಧವಾರ ಮುಂಜಾನೆ 4.30 ಸುಮಾರಿಗೆ ಆತನ ಬೈಕ್ ಮತ್ತೆ ಪಾಣೆಮಂಗಳೂರು ಸೇತುವೆಯ ಮೇಲೆ ಕಂಡುಬಂದಿದ್ದು, ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
"ಜುಲೈ 17ರಂದು ಪೆಟ್ರೋಲ್ ಹಾಕುವುದಕ್ಕೆ ಎಂದು ತಾಯಿಯ ಬಳಿಯಿಂದ 200 ರೂ. ಪಡೆದುಕೊಂದು ಕೆಲಸಕ್ಕೆಂದು ಹೋಗಿದ್ದ. ಆದರೆ, ಆತ ಕೆಲಸಕ್ಕೆ ಹೋಗದೇ ರಾತ್ರಿ 11ರ ಸುಮಾರಿಗೆ ತಾಯಿಗೆ ಕರೆ ಮಾಡಿ ಗೆಳೆಯನ ಮನೆಯಲ್ಲಿ ಇರುವುದಾಗಿ ಹೇಳಿದ್ದಾನೆ. ಮೊಬೈಲ್ ಆನ್ಲೈನ್ ಗೇಮ್ ಮೂಲಕ ಆತ ಸಾಕಷ್ಟು ಹಣ ಕಳೆದುಕೊಂಡಿದ್ದು, ಆ ಕಾರಣದಿಂದ ಆತ ಈ ರೀತಿ ವರ್ತಿಸುತ್ತಿದ್ದಾನೆ" ಎಂದು ಆತನ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಬೈಕ್ ಪೊಲೀಸರ ವಶದಲ್ಲಿದ್ದು, ಸವಾರನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
"ಈ ಬಗ್ಗೆ ಬೆಂಗಳೂರಿನ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಬಂಟ್ವಾಳ ನಗರ ಪೊಲೀಸರು ಹೇಳಿದ್ದಾರೆ.