ಉಡುಪಿ, ಜು 29 (DaijiworldNews/MS): ಜಿಲ್ಲೆಯ ಬ್ರಹ್ಮಾವರ ತಾಲೂಕಿನ ೩೮ನೇ ಕಳ್ತೂರು ಗ್ರಾಮದ ವ್ಯಾಪ್ತಿಯಲ್ಲಿ ಕಲ್ಲು ಕ್ರಶರ್ ಮತ್ತು ಗಣಿಗಾರಿಕೆ ಮಾಡುವುದರ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು ಈ ಬಗ್ಗೆ ಜು. ೨೮ರಂದು ಗ್ರಾಮಸ್ಥರು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿಯನ್ನು ಸಲ್ಲಿಸಿದ್ದರು.
ಕಲ್ಲು ಗಣಿಗಾರಿಕೆ ಮಾಡುವ ಕುರಿತು ಇಲಾಖೆ ಅಧಿಕಾರಿಗಳು ಜು.27 ರಂದು ಬಂದು ಸ್ಥಳ ಪರಿಶೀಲನೆ ಮಾಡಿದ್ದು ಇದನ್ನು ಗಮನಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ವಿರೋಧ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ಮಾಡಲು ಬಿಡುವುದಿಲ್ಲ, ಇದರಿಂದ ಬೆಳೆಹಾನಿಯಾಗುತ್ತೆಂದು ಸ್ಥಳಕ್ಕೆ ಆಗಮಿಸಿದ ಇಲಾಖಾಧಿಕಾರಿಗಳಲ್ಲಿ ಮನವಿಯನ್ನು ಸಲ್ಲಿಸಿದ್ದರು. ಈ ಪ್ರದೇಶದಲ್ಲಿ ದೈವದೇವರು ಇರುವುದರಿಂದ, ಸುಮಾರು 500 ಎಕ್ರೆ ಕೃಷಿ ಭೂಮಿ ಇರುವುದರಿಂದ ಗಣಿಗಾರಿಕೆಯಿಂದ ಆಗುವ ಧೂಳು, ಮಿಶ್ರಿತ ನೀರಿನಿಂದ ಗ್ರಾಮಸ್ಥರಿಗೆ, ಜಾನುವಾರುಗಳು ಸೇರಿದಂತೆ ಆರೋಗ್ಯಕ್ಕೆ, ಪರಿಸರಕ್ಕೆ ಹಾನಿಯಾಗುತ್ತದೆ.
ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅನುಮತಿಯನ್ನು ನೀಡಬಾರದೆಂದು ಗ್ರಾಮಸ್ಥರ ಪರವಾಗಿ ಭೀಮರಾಯ ಕಾಮತ್ ಅವರು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು. ಸುರೇಶ್ ಕಾಮತ್, ಉಮಾಕಾಂತ್ ಕಾಮತ್, ಉದಯ್ ನಾಯಕ್, ರತ್ನಾಕರ್ ಶೆಟ್ಟಿ, ಉಮೇಶ್ ಕುಲಾಲ್, ಕೃಷ್ಣಾನಂದ ಪೈ, ಗಣೇಶ್ ಕಾಮತ್ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.