ಮಂಗಳೂರು, ಜು 29 (DaijiworldNews/MS): ಅಂಬ್ಲಮೊಗರು ಗ್ರಾಮ ಪಂಚಾಯತ್ ನ ಗ್ರಾಮ ಸಹಾಯಕ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಜು.29 ರ ಬೆಳಗ್ಗೆ ನಡೆದಿದೆ.
ಅಂಬ್ಲಮೊಗರು ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ (34) ಆತ್ಮಹತ್ಯೆಗೈದವರು. ಮನೆ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಪತ್ನಿಯನ್ನು ವಾಹನದಲ್ಲಿ ಕುತ್ತಾರಿನ ವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. ಬಳಿಕ ಮನೆಯಲ್ಲಿ ಕೃತ್ಯವೆಸಗಿದ್ದಾರೆ. ಮನೆಯಲ್ಲಿದ್ದ ತಾಯಿ ರೂಮಿನೊಳಗೆ ತೆರಳಿದಾಗ ಆತ್ಮಹತ್ಯೆಗೈದ ವಿಚಾರ ಬೆಳಕಿಗೆ ಬಂದಿದೆ.
ಮೃತ ನಿತಿನ್ ಅವರು ತಾಯಿ, ಪತ್ನಿ, ಮೂರು ಸಹೋದರರನ್ನ ಅಗಲಿದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಬ್ಲಮೊಗರು ಪಂಚಾಯಿತಿನಲ್ಲಿ ನಿತಿನ್ ಅವರ ಚಿಕ್ಕಪ್ಪ ಗ್ರಾಮಸಹಾಯಕರಾಗಿದ್ದು, ಅವರ ಅಗಲುವಿಕೆಯ ಬಳಿಕ ಅವರ ನಿತಿನ್ ಅವರಿಗೆ ಕೆಲಸ ದೊರೆತಿತ್ತು. ಎರಡು ವರ್ಷಗಳ ಹಿಂದೆ ನಿತಿನ್ ಅವರ ತಂದೆ ದಯಾನಂದ ಶೆಟ್ಟಿ ಅವರು ತೆಂಗಿನ ಮರದಿಂದ ಬಿದ್ದು ಸಾವನ್ನಪ್ಪಿದ್ದರು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821