ಮಂಗಳೂರು, ಜು 29 (DaijiworldNews/PY): "ಸಚಿವ ಸ್ಥಾನದ ನಿರೀಕ್ಷೆ ಇಲ್ಲದ ರಾಜಕಾರಣಿಗಳು ಕರ್ನಾಟಕದಲ್ಲಿ ಯಾರಿದ್ದಾರೆ?" ಎಂದು ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.
ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಚಿವ ಸ್ಥಾನದ ನಿರೀಕ್ಷೆ ಇಲ್ಲದ ರಾಜಕಾರಣಿಗಳು ಕರ್ನಾಟಕದಲ್ಲಿ ಯಾರಿದ್ದಾರೆ?. ನಿರೀಕ್ಷೆ ಎಲ್ಲರಿಗೂ ಇರುತ್ತದೆ" ಎಂದು ತಿಳಿಸಿದ್ದಾರೆ.
"ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ನನ್ನಂತ ಸಾಮಾನ್ಯ ಕಾರ್ಯಕರ್ತನಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ನನ್ನ ಎರಡೂ ಇಲಾಖೆಯು ಭ್ರಷ್ಟಾಚಾರ ಮುಕ್ತ ಎಂದು ಧೈರ್ಯದಿಂದ ಹೇಳುತ್ತೇನೆ. ಈ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು, ಸಿಎಂ ಬಸವರಾಜ ಬೊಮ್ಮಾಯಿ ಅವರು ನನಗೆ ಜವಾಬ್ದಾರಿ ನೀಡಿದಲ್ಲಿ ನಾನು ಖಂಡಿತವಾಗಿ ನಿರ್ವಹಿಸುತ್ತೇನೆ" ಎಂದಿದ್ದಾರೆ.
"ಯಾರನ್ನು ಮಂತ್ರಿ ಮಾಡಬೇಕು ಎನ್ನುವುದನ್ನು ಸಿಎಂ ಅವರು ತೀರ್ಮಾನಿಸುತ್ತಾರೆ. ಯಾರು ಮಂತ್ರಿಯಾಗಬೇಕು ಎಂದು ನನಗೆ ತಿಳಿದಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವರು ಜೊತೆಯಾಗಿ ಕುಳಿತು ಅತ್ಯಂತ ಪಾರದರ್ಶಕವಾಗಿ ಚರ್ಚೆ ನಡೆಸಿ, ಯಾವ ರೀತಿಯಲ್ಲಿ ಸೂಕ್ತವಾಗಿ ಸಿದ್ದತೆ ಮಾಡಿಕೊಳ್ಳಬೇಕು, ಒಬ್ಬ ಸಚಿವರು ಯಾವ ರೀತಿಯಾದ ಯೋಜನೆಗಳನ್ನು ಮಾಡಿಕೊಳ್ಳಬೇಕು ಹಾಗೂ ಇನ್ನು ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕಾದಲ್ಲಿ ಒಳ್ಳೆಯ ತಂಡವನ್ನು ರಚನೆ ಮಾಡಬೇಕು ಎನ್ನುವ ಬಗ್ಗೆ ನಿರ್ಧರಿಸುತ್ತಾರೆ" ಎಂದು ಹೇಳಿದ್ದಾರೆ.