ಮಣಿಪಾಲ, ಜು 29 (DaijiworldNews/PY): ಅಗತ್ಯದ ಸಲುವಾಗಿ ವ್ಯಕ್ತಿಯಿಂದ ಹಣ ಪಡೆದು ಹಿಂತಿರುಗಿಸದೇ ವಂಚಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಹೀನಾ ಎಂಟರ್ಪ್ರೈಸಸ್ ನಡೆಸುತ್ತಿರುವ ತಬುಸ್ಸುಮ್ (28) ಎಂಬವರ ಜೊತೆ ಮೊಹಮ್ಮದ್ ರಪೀಕ್ (45) ಎಂಬವರು ಕೆಲಸ ಮಾಡುತ್ತಿದ್ದು, ತಬುಸ್ಸುಮ್ ಅವರ ಮನೆಯಲ್ಲೇ ವಾಸವಾಗಿದ್ದರು. ಅಲ್ಲದೇ ಮೊಹಮ್ಮದ್ ರಫೀಕ್ ತಬುಸ್ಸುಮ್ ಅವರೊಂದಿಗೆ ಅನ್ಯೋನ್ಯವಾಗಿದ್ದು, ರಫೀಕ್ ಅವರನ್ನು ನಂಬಿದ್ದರು. ಆದರೆ, ತಬುಸ್ಸುಮ್ ಅವರನ್ನು ನಂಬುವಂತೆ ಮಾಡಿದ ಮೊಹಮ್ಮದ್ ರಫೀಕ್ ತನ್ನ ಅಗತ್ಯದ ಸಲುವಾಗಿ 3,50,000 ರೂ. ಪಡೆದುಕೊಂಡಿದ್ದಾರೆ.
ಹಣ ಹಿಂತಿರುಗಿಸದೇ ಇದ್ದ ಕಾರಣ ತಬುಸ್ಸುಮ್ ಅವರು ಮೊಹಮ್ಮದ್ ರಫೀಕ್ ಜೊತೆ ವಾಪಾಸ್ಸು ಹಣ ನೀಡುವಂತೆ ಕೇಳಿದ್ದರು. ಆದರೆ, ಜುಲೈ 4ರಂದು ಮೊಹಮ್ಮದ್ ರಫೀಕ್, ತಬುಸ್ಸುಮ್ ಅವರ ಫ್ಲಾಟ್ಗೆ ಬಂದು ನನಗೆ ಹಣ ಕೊಡಲು ಆಗುವುದಿಲ್ಲ. ನೀನು ಏನು ಬೇಕಾದರೂ ಮಾಡಿಕೋ. ನಿನ್ನಿಂದ ಹಣ ವಸೂಲಿ ಮಾಡಲು ಸಾಧ್ಯವಿಲ್ಲ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಹಣ ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುವುದಾಗಿ ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.