Karavali
ಉಡುಪಿ: ಕರಾವಳಿಯಿಂದ ಬೊಮ್ಮಾಯಿ ಸಂಪುಟ ಸೇರೋದು ಯಾರು? ಉಡುಪಿಯವರೇ ಆಗ್ತಾರಾ ಉಸ್ತುವಾರಿ ಸಚಿವರು
- Wed, Jul 28 2021 11:05:58 PM
-
ಉಡುಪಿ, ಜು. 28 (DaijiworldNews/SM): ಉಡುಪಿ ಜಿಲ್ಲೆಯ ಮಟ್ಟಿಗೆ ಜುಲೈ ತಿಂಗಳು ಒಂದು ರೀತಿಯಲ್ಲಿ ಫಲಪ್ರದ ಮಾಸ ಎಂದರೆ ತಪ್ಪಾಗಲಾರದು. ಜಿಲ್ಲಾ ಉಸ್ತುವಾರಿಯಾಗಿರುವ ಬಸವರಾಜ ಬೊಮ್ಮಾಯಿ ಈಗ ರಾಜ್ಯದ ಸಾರಥಿ ಪಟ್ಟ ಸಿಕ್ಕಿದರೆ, ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿರುವ ಶೋಭಾ ಕರಂದ್ಲಾಜೆಯವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಆದರೆ ಈಗ ಐದು ಶಾಸಕರಿದ್ದರೂ ನಮ್ಮವರು ನಮಗೆ ಉಸ್ತುವಾರಿಗಳು ಆಗ್ತಾರಾ? ಅನ್ನೋದು ಈ ಚರ್ಚೆಗೆ ಗ್ರಾಸವಾದ ವಿಷಯ.
ಬಿಜೆಪಿಯಲ್ಲಿ ಅದೇನೆ ಸ್ಥಾನಗಳು ಕೊಡುವುದಿದ್ದರೂ ಜಾತಿ, ಸಮುದಾಯ, ಸಂಘಟನಾ ಚತುರತೆ, ವ್ಯಕ್ತಿತ್ವ, ಸಂಘ-ಪರಿವಾರದ ಅಡಿಪಾಯ, ಪಕ್ಷದಲ್ಲಿ ಕಾರ್ಯಕರ್ತರಾಗಿ ಅನುಭವ, ಶಿಕ್ಷಣ ಹೀಗೆ ಹಲವಾರು ಲೆಕ್ಕಚಾರದ ನಂತರವೇ ಅಂತಿಮ ತೀರ್ಮಾನಕ್ಕೆ ಬರುತ್ತದೆ.
ಇಂತಹ ಅನುಭವ ಉಡುಪಿಯ ಜನತೆಗೆ ಹೊಸದೇನಿಲ್ಲ. ಹಾಗಾದರೆ ನಮ್ಮಲ್ಲಿ ಆ ಅರ್ಹತೆ ಇಲ್ಲವೇ ಅನ್ನುವುದು ಕೂಡ ಒಂದು ಪ್ರಶ್ನೆಯಾಗಿದೆ. ಹಿಂದಿನ ಬೆಳವಣಿಗೆ ನೋಡಿದಾಗ ಹಾಗೆ ಅಭಿಪ್ರಾಯ ಬರುವುದು ಸಹಜ. ಯಾಕೆಂದರೆ, ಶೋಭಾ ಕರಂದ್ಲಾಜೆಯವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರು. ಆದರೆ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದು ರಾಜಕೀಯವಾಗಿ ಬೆಳೆದಂತೆಲ್ಲ ರಾಜ್ಯ ಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡದ್ದೇ ಹೆಚ್ಚು. ಬಿಜೆಪಿ ನಾಯಕರಿಗೇ ಅವರು ಉಡುಪಿಯಲ್ಲಿ ಪ್ರತಿನಿಧಿಸುವುದು ಇಷ್ಟವಿಲ್ಲವಾಗಿತ್ತು. ಆದರೂ ರಾಜಕೀಯ ಲೆಕ್ಕಾಚಾರ ಬಂದಾಗ ಅವರನ್ನು ಉಡುಪಿಯ ಜನತೆ ಒಪ್ಪಿಕೊಳ್ಳಲೇಬೇಕಾಯ್ತು.
2019ರಲ್ಲಿ ಉಡುಪಿ ಜಿಲ್ಲೆಗೆ ಉಸ್ತುವಾರಿ ಯಾರಾಗ್ತಾರೆ ಅನ್ನುವ ಚರ್ಚೆ ಬಂದಾಗ ಉಡುಪಿಗೆ ಬಹಳ ಚುರುಕಿನ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿಯವರೇ ಆಗುತ್ತಾರೆ ಎಂಬ ನಂಬಿಕೆ ಉಡುಪಿ ಜನತೆಗೆ ಇತ್ತು. ಅದೇನೊ ಬಿಜೆಪಿಯ ಆಂತರಿಕ ರಾಜಕಾರಣದಿಂದ ನಮ್ಮವರಾಗಿದ್ದರೂ ಕೈಯಿಂದ ತಪ್ಪಿ ಹೋದರು. ಬೊಮ್ಮಾಯಿ ಗೃಹ ಸಚಿವರಾಗಿದ್ದುಕೊಂಡು ಎರಡು ಜಿಲ್ಲೆಯ ಉಸ್ತುವಾರಿಯಾದರು. ಉಡುಪಿಯ ಬಿಲ್ಲವರೂ ಸೇರಿದಂತೆ ಜನತೆ ಕೋಟಾ ಕಾರ್ಯಕರ್ತರು ಅಭಿಮಾನಿಗಳು ಅಸಮಧಾನ ಗೊಂಡದ್ದಂತೂ ಸುಳ್ಳಲ್ಲ. ಈಗ ಮತ್ತೆ ಎರಡು ವರ್ಷದ ಹಿಂದಿನ ಬೆಳವಣಿಗೆ ಉಡುಪಿಗೆ ಎದುರಾಗಿದೆ.
ಜಿಲ್ಲೆಯಲ್ಲಿ ಐದು ಶಾಸಕರಿದ್ದು ಅವರವರ ಮಟ್ಟಿಗೆ ಅವರವರ ಕ್ಷೇತ್ರದಲ್ಲಿ ಪ್ರಭಾವಿಗಳು, ಸಂಘಟನಾ ಬಲ, ಕಾರ್ಯಕರ್ತ ಬೆಂಬಲ ಹಾಗೂ ಕಾರ್ಯ ವೈಖರಿಯಿಂದ ಗುರುತಿಸಿಕೊಂಡಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ತೆಗೆದುಕೊಂಡರೆ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟರು ಬಹಳ ಸರಳ ವ್ಯಕ್ತಿತ್ವ. ಐದನೇ ಬಾರಿ ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ನಿಂತು ಗೆದ್ದು ಬೀಗಿದವರು. ಉಸ್ತುವಾರಿ ಅಥವಾ ಸಚಿವ ಸ್ಥಾನಕ್ಕೆ ಆಕಾಂಕ್ಷಿ ಅಲ್ಲವೇ ಅಂತೇನಿಲ್ಲ. ಆದರೆ ಎಲ್ಲೂ ಹೇಳಿಕೊಂಡಿಲ್ಲ. ಸ್ಥಾನ ಒಲಿದು ಬಂದರೆ ತನಗೆ, ಇಲ್ಲದಿದ್ದರೆ ತಾನೋಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ ಎನ್ನುವ ಜಾಯಮಾನ.
ಇನ್ನು ಬೈಂದೂರಿನ ಸುಕುಮಾರ್ ಶೆಟ್ಟಿಯವರ ವ್ಯಕ್ತಿತ್ವ ವಿಭಿನ್ನ. ಮಾಜಿ ಮುಖ್ಯಮಂತ್ರಿಯವರ ಮಗನ ಕ್ಷೇತ್ರ ಅರ್ಧ ಭಾಗ ಬೈಂದೂರಿಗೆ ಸೇರುತ್ತದೆ. ಹಾಗಾಗಿ ಯೆಡಿಯೂರಪ್ಪನವರ ಆಪ್ತರಾಗಿದ್ದಾರೆ ಎಂದೇ ಎಲ್ಲರಿಂದಲೂ ಗುರುತಿಸಿಕೊಂಡವರು. ನೇರ ನುಡಿಯ ವ್ಯಕ್ತಿತ್ವ. ಕಾರ್ಯಕರಲ್ಲಿ ಅಷ್ಟೊಂದು ಆತ್ಮೀಯತೆ ಕಡಿಮೆ. ಮೋದಿಯ ಅಲೆಯಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಗೆದ್ದು ಬೀಗಿದವರು.
ಇನ್ನು ಉಡುಪಿ ಶಾಸಕರಾದ ಕೆ ರಘುಪತಿ ಭಟ್ ರು, ಗೃಹ ಸಚಿವರಗಿದ್ದ ದಿವಂಗತ ಡಾ. ವಿ. ಎಸ್. ಆಚಾರ್ಯ ಅವರ ಗರಡಿಯಲ್ಲಿ ಬೆಳೆದು ಬಂದವರು. ಸಂಘಟನಾ ಚತುರ. ಹಲವಾರು ಅಭಿವೃದ್ದಿಯನ್ನು ಉಡುಪಿಗೆ ಮಾಡಿದವರು. ರಾಜಕೀಯ ಪ್ರವೀಣ. ಕೇವಲ ರಾಜಕೀಯವಲ್ಲದೆ, ಇತರ ಕ್ಷೇತ್ರದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು, ಯುವಕರನ್ನು ಪ್ರೋತ್ಸಾಹಿಸುವ ಗುಣ ಇವರದು. "ತನ್ನ ಇತಿಮಿತಿಗಳು ಗೊತ್ತಿದೆ. ತಾನು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಇನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಬಿಜೆಪಿಯ ಹಿರಿಯ ಮುಸ್ಸದ್ದಿ. ಸರಳ ವ್ಯಕ್ತಿತ್ವದ ರಾಜಕಾರಣಿ ಎಂದೇ ಗುರುತಿಸಲ್ಪಟ್ಟವರು. ಯಾವುದೇ ಹುದ್ದೆ ಕೊಟ್ಟರೂ ಸೈ. ಕಳೆದ ಬಾರಿ ಮೆಂಡನ್, ಯಡಿಯೂರಪ್ಪ ನವರ ಸಂಪುಟದಲ್ಲಿ ಹಿಂದುಳಿದ ವರ್ಗಗಳ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಪಟ್ಡ ಕೊಟ್ಟು ಅದೇ ದಿನ ಸಂಜೆ ಆದೇಶ ವಾಪಾಸು ಪಡೆದುಕೊಂಡಿತ್ತು. ಈ ಅಸಮಾಧಾನ ಇದ್ದಿದ್ದೇ. ಆದರೆ ರೆಬೆಲ್ ಆಗಿ ನಡೆದುಕೊಳ್ಳುವ ಜಾಯಮಾನದವರಲ್ಲ. ತನ್ನ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಟ್ಟು ಕೇವಲ ತಮ್ಮ ಕ್ಷೇತ್ರ ರಾಜಕಾರಣಕ್ಕೆ ಸೀಮಿತರಾಗಿದ್ದಾರೆ.
ಮುಂದೆ ಬೊಮ್ಮಾಯಿ ಸಾರಥ್ಯದ ಸಚಿವ ಸಂಪುಟಕ್ಕೆ ಉಡುಪಿಯಿಂದ ಯಾರು ಆಯ್ಕೆ ಅಗಬಹುದು. ಇದಕ್ಕೆ ಉತ್ತರ ಊಹಿಸಲು ಕಷ್ಟ ಸಾಧ್ಯ.
ಇನ್ನು ಉಳಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸುನಿಲ್ ಕುಮಾರ್ ಕಳೆದ ಬಾರಿ ಬಿ ಎಸ್ ಯಡಿಯೂರಪ್ಪನವರ ಸಚಿವ ಸ್ಥಾನಕ್ಕೆ ಬಹಳಷ್ಟು ಕಾತುರಾಗಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಎಲ್ಲವೂ ಬದಲಾಯಿತು. ಕರಾವಳಿ ಭಾಗದ ಉಡುಪಿ ಜಿಲ್ಲೆಯಲ್ಲಿ ಜಾತಿ ಸಮುದಾಯದಲ್ಲಿ ಸಿಂಹಪಾಲು ಬಿಲ್ಲವರದ್ದೆ. ಆದರೂ ಕಟ್ಟಾ ಬಿಜೆಪಿ - ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ , ಪಕ್ಷ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಸುನಿಲ್ ಗೆ ಸಚಿವ ಸ್ಥಾನ ಸಿಗದಿರುವುದು ಅಸಮಾಧಾನ ತಂದಿತ್ತು. ಈ ಬಾರಿಯೂ ಸುನಿಲ್ ಕುಮಾರ್ ರವರ ಹೆಸರು ಮುಂಚೂಣಿಯಲ್ಲಿದೆ. ಉಸ್ತುವಾರಿ ಪಟ್ಟ ಸಿಕ್ಕಿದರೆ ಒಂದು ಮೌಲ್ಯ ಬರುತ್ತೆ ಎನ್ನುವುದು ಹಲವರ ಅಭಿಪ್ರಾಯ ಅಥವಾ ಅವರಿಗೆ ಉಡುಪಿಯಲ್ಲಿ ಸ್ಪರ್ಧೆಗೆ ನಿಲ್ಲುವ ಮತ್ತೋರ್ವ ಇಲ್ಲ ಎಂದರೂ ತಪ್ಪನಿಸದು.
ಉಡುಪಿಯವರನ್ನು ಸಚಿವರನ್ನಾಗಿಸುವುದು ಮತ್ತು ಉಡುಪಿಯ ಮೂಲದವರೇ ಉಸ್ತುವಾರಿ ಯಾಗುವುದು ಒಂದು ರೀತಿಯಲ್ಲಿ ಉಡುಪಿ ಅಂದರೆ ಬಿಜೆಪಿಗೆ ಈಗ ಪ್ರತಿಷ್ಟೆಯ ಕಣವಾಗಿದೆ.
ಇಷ್ಟೆಲ್ಲ ಬೆಳವಣಿಗೆ ಆಗಬೇಕಾದರೆ ಬೊಮ್ಮಾಯಿಯವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರು ಸ್ಥಾನ ಪಡೆಯುತ್ತಾರೋ ಅನ್ನುವುದು ಕುತೂಹಲದ ವಿಚಾರ. ಅದರಲ್ಲೂ ಉಡುಪಿಯ ರಾಜಕಾರಣ ತೆಗೆದುಕೊಂಡರೆ, ಪಕ್ಷದ ಹಿರಿಯರಿಗೋ, ಜಾತಿ ಲೆಕ್ಕಾಚಾರದಲ್ಲೋ ಅಥವಾ ವ್ಯಕ್ತಿತ್ವ ನೋಡಿಯೋ ಕೊಡಬಹುದು. ಆದರೂ ಕರಾವಳಿ ಭಾಗದಲ್ಲಿ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮುಂಚೂಣಿಯಾಗಿ ಒಬ್ಬರದೆ ಹೆಸರು ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ನಮ್ಮವರೇ ಉಸ್ತುವಾರಿ ಆಗ್ತಾರಾ? ಯಾರಿಗೆ ಸಚಿವ ಸ್ಥಾನ ಸಿಗಬಹುದು? ಜನರ ನಿರೀಕ್ಷೆ ನೆರವೇರುತ್ತಾ? ರಾಜ್ಯದ ನೂತನ ಸಚಿವ ಸಂಪುಟ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.