ಬಂಟ್ವಾಳ, ಜು. 28 (DaijiworldNews/SM): ಪತ್ರಿಕಾ ವಿತರಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಆಚರಿಸಿರುವುದು ಶ್ಲಾಘನೀಯ ಎಂದು ಬಂಟ್ವಾಳ ಡಿವೈಎಸ್ಪಿ ವೆಲೈಂಟಿನ್ ಡಿಸೋಜ ಹೇಳಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ, ಬಂಟ್ವಾಳ ಪ್ರೆಸ್ ಕ್ಲಬ್ ಸಹಯೋಗದೊಂದಿಗೆ ಬುಧವಾರ ಬಿ.ಸಿ.ರೋಡ್ ನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಶ್ರದ್ಧೆ ಮೆಚ್ಚುವಂತಾದ್ದು ಎಂದರು. ಬಂಟ್ವಾಳದಲ್ಲಿ ವೃತ್ತ ನಿರೀಕ್ಷಕನಾಗಿ ವೃತ್ತಿ ನಡೆಸುತ್ತಿದ್ದ ಸಂದರ್ಭ ಇಲ್ಲಿನ ಪತ್ರಕರ್ತರು ಉತ್ತಮ ಸಹಕಾರ ನೀಡಿದ್ದಾರೆ. ಇದರಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು. ಪತ್ರಕರ್ತರ ಕೆಲಸ ಸುಲಭದಲ್ಲ, ಕೆಲವೊಮ್ಮೆ ಜೀವದ ಹಂಗು ತೊರೆದು ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ, ಪತ್ರಕರ್ತರದ್ದು ಸಾಹಸದ ಜೀವನ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಪುಷ್ಪಲತಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಿಕಾ ವಿತರಕರಾದ ವಿಟ್ಲದ ರಾಜಮ್ಮ ಕೆ.ವಿ, ವಗ್ಗದ ಲೋಕಯ್ಯ ಗೌಡ, ಬಿ.ಸಿ.ರೋಡಿನ ಮಿತ್ತಬೈಲಿನ ನರಸಿಂಹ ಪೈ ಅವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ , ಕಾರ್ಯದರ್ಶಿ ಮಹಮ್ಮದ್ ಆಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಹರೀಶ ಮಾಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಸದಸ್ಯರಾದ ರತ್ಮದೇವ್ ಪುಂಜಾಲಕಟ್ಟೆ, ಕಿರಣ್ ಸರಪಾಡಿ, ರಮೇಶ್ ಕೆ.ಪುಣಚ ಸನ್ಮಾನಿತರನ್ನು ಪರಿಚಯಿಸಿದರು. ಸದಸ್ಯರಾದ ವಾಮನ ಪೂಜಾರಿ, ಇಮ್ತಿಯಾಜ್ ಶಾ ತುಂಬೆ, ಅಬ್ದುಲ್ ರಹಿಮಾನ್ ತಲಪಾಡಿ, ಯಾದವ್ ಅಗ್ರಬೈಲ್, ಚಂದ್ರಶೇಖರ ಕಲ್ಮಲೆ ಅತಿಥಿಗಳನ್ನು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿ ವಿಟ್ಲ ವಂದಿಸಿದರು, ನಿಕಟಪೂರ್ವಾಧ್ಯಕ್ಷ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.