ಕಾರ್ಕಳ, ಜು 28 (DaijiworldNews/PY): "ಅತಿವೃಷ್ಠಿ ಅನಾವೃಷ್ಠಿ ಸೇರಿದಂತೆ ಪ್ರಾಕೃತಿಕ ವಿಕೋಪದಿಂದಾಗಿ ರೈತರು ಬೆಳೆಸಿರುವ ಬೆಳೆಯು ಹಾನಿಯಾಗಾದ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಮೆಯ ರೈತರ ಪಾಲಿಗೆ ವರದಾನವಾಗಲಿದೆ. ಪ್ರತಿಯೊಬ್ಬನು ಕೃಷಿ ವಿಮೆ ಮಾಡಿಕೊಂಡಾಗ ಕೃಷಿ ನಷ್ಟಕ್ಕೊಳಗಾದ ಸಂದರ್ಭದಲ್ಲಿ ಉಂಟಾಗುವ ಮಾನಸಿಕ ಆಘಾತವನ್ನು ದೂರೀಕರಿಸಬಹದು" ಎಂದು ಹಿರಿಯ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ದುರ್ಗ ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ಆಯೋಜಿಸಿ 2021-22 ನೇ ಸಾಲಿನ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಸಮಗ್ರ ಕೃಷಿ ಪದ್ದತಿ ಮಾಹಿತಿ ಕಾರ್ಯಕ್ರಮ, ಸಮಗ್ರ ಕೃಷಿ ಅಭಿಯಾನ ಹಾಗೂ ಬೆಳೆ ಸಮೀಕ್ಷೆ ಕುರಿತು ಉತ್ಸವ ಮಾಹಿತಿ ರಥಕ್ಕೆ ಚಾಲನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಅಧ್ಯಕ್ಷತೆ ವಹಿಸಿ, ಜಲಾನಯನ ವ್ಯಾಪ್ತಿಯ ಗ್ರಾಮದ ರೈತರಿಗೆ ಸಾಂಕೇತಿಕ ವಾಗಿ ಸಸಿ ವಿತರಣೆ ಮತ್ತು ಇಲಾಖೆಯ ಮಾಹಿತಿ ಕೈಪಿಡಿಯನ್ನು ಅಧ್ಯಕ್ಷರು ಬಿಡುಗಡೆ ಗೊಳಿಸಿದರು. ಬಳಿಕ ಮಾಹಿತಿ ರಥಕ್ಕೆ ಚಾಲನೆಯನ್ನುನೀಡಿ ಮಾತನಾಡಿದ ಅಧ್ಯಕ್ಷರು, "ರೈತರು ಇಂತಹ ಮಾಹಿತಿ ಸಭೆಗಳಲ್ಲಿ ಭಾಗವಹಿಸಿದಾಗ ಮಾತ್ರ ಉಪಯುಕ್ತ ಮಾಹಿತಿಯನ್ನು ಪಡೆಯಬಹುದು. ಇಲಾಖೆ ಮತ್ತು ರೈತರ ನಡುವೆ ಜನಪ್ರತಿನಿಧಿಗಳಾದ ನಾವು ಕೊಂಡಿಯಾಗಿ ಕಾರ್ಯ ನಿರ್ವಹಿಸಿ ಪ್ರಾಮಾಣಿಕವಾಗಿ ಜನಸೇವೆ ಮಾಡಲಿದ್ದೇವೆ" ಎಂದರು.
ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಘೋಷ ವಾಕ್ಯದ ಮಹತ್ವವನ್ನು ವಿವರಿಸಿದರು. ಇಲಾಖೆಯ ಮತ್ತು ಆತ್ಮ ಯೋಜನೆಯ ಮೂಲಕ ರೈತರಿಗೆ ಸಿಗುವ ಸಬ್ಸಿಡಿ ಯೋಜನೆಗಳನ್ನು ತಿಳಿಸಿದರು.
ರೈತ ಗೀತೆಯನ್ನು ವಿನೋದ್ ನಾತೂ ನೆರವೇರಿಸಿದರು. ಸಹಾಯಕ ಕೃಷಿ ಅಧಿಕಾರಿ. ಸಿದ್ದಪ್ಪ ತುಡುಬಿನ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಕೃಷಿ ಅಧಿಕಾರಿ ರಮೇಶ್ ಉಳ್ಳಾಗಡ್ಡಿ ವಂದಿಸಿದರು.