ಕಾರ್ಕಳ, ಜು 28 (DaijiworldNews/PY): "ಪುರಸಭಾ ವ್ಯಾಪ್ತಿಯಲ್ಲಿ ನೂತನವಾಗಿ 13 ಕೋಟಿ ರೂ. ವೆಚ್ಚದಲ್ಲಿ ಪುನ:ನಿರ್ಮಾಣ ಗೊಳ್ಳುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಇದೊಂದು ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಾಗಿದ್ದು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುತ್ತದೆ" ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.
ಅವರು ಕಾರ್ಕಳ ನಗರದ ಒಳಚರಂಡಿ ಯೋಜನೆಯ ಕಳಪೆ ಕಾಮಗಾರಿ ವಿರುದ್ಧ ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ಜಂಟಿ ಯಾಗಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.
"32 ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಕನಸಿನ ಕೂಸಾಗಿದ್ದ ಈ ಯೋಜನೆ 1989ರಲ್ಲಿ ಅಂದಿನ ತಂತ್ರಜ್ಞಾನ ದೊಂದಿಗೆ ಅನುಷ್ಠಾನಕ್ಕೆ ಬಂದಿತ್ತು. ಮತ್ತೆ 30 ವರ್ಷಗಳ ಬಳಿಕ ಶಿಥಿಲಗೊಂಡ ಈ ಯೋಜನೆಯನ್ನು ಸಿದ್ಧರಾಮಯ್ಯ ಆಡಳಿತಾವದಿಯಲ್ಲಿ ಸಂಪೂರ್ಣವಾಗಿ ಹಳೆಯ ಡ್ರೈನೇಜ್ ಲೈನ್ ತೆರವುಗೊಳಿಸಿ ಪುನ:ನಿರ್ಮಾಣದ ಗುರಿಯೊಂದಿಗೆ ಮಾಜಿ ಶಾಸಕರಾಗಿದ್ದ ದಿ. ಗೋಪಾಲ ಭಂಡಾರಿಯವರ ಮುತುವರ್ಜಿಯಲ್ಲಿ 20 ಕೋಟಿ. ರೂ.ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ಇಂದು ಈ ಯೋಜನೆ ಕೆಲವೇ ಮಂದಿಯ ಸಂಪನ್ಮೂಲ ಕ್ರೋಡೀಕರಣದ ಕಾರ್ಯಕ್ರಮವಾಗಿ ಕೊಳಚೆ ನೀರು ಆಧುನಿಕ ತಂತ್ರಜ್ಞಾನದ ಹೆಸರಲ್ಲಿ ಹಳ್ಳ ಹಿಡಿದು ಕೊಳಚೆ ನೀರು ನಗರದ ರಸ್ತೆಯಲ್ಲಿ ಹರಿಯುವಂತಾಗಿದೆ" ಎಂದರು.
ಪುರಸಭಾ ಸದಸ್ಯ ಶುಭದಾ ರಾವ್ ಮಾತನಾಡಿ, "ಶಾಸಕರ ಬೇಜವಾಬ್ದಾರಿಯೇ ಇಂದಿನ ಈ ದುಸ್ಥಿತಿಗೆ ಕಾರಣ. ಪುರಸಬೆಯಲಿ ಕಾಂಗ್ರೆಸ್ ಆಡಳಿತಾವದಿಯಲ್ಲಿ ಕೊಳಚೆ ನಿರ್ವಹಣೆ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದ್ದ ಪುರಸಭೆ ಇಂದು ಅರಾಜಕ ಸ್ಥಿತಿಯಲ್ಲಿದೆ. ಇದಕ್ಕೆ ಶಾಸಕರೆ ನೇರ ಹೊಣೆ" ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪುರಸಭ ಸದಸ್ಯ ಆಶ್ಫಕ್ ಅಹಮ್ಮದ್ ಸಂಧರ್ಭೋಚಿತವಾಗಿ ಮಾತಾಡಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಕೃಷಿ ಘಟಕ ಅಧ್ಯಕ್ಷ ಉದಯ ಶೆಟ್ಟ, ಮಹಿಳಾ ಅಧ್ಯಕ್ಷೆ ಅನಿತಾ ಡಿ'ಸೋಜ, ನಗರ ಅಧ್ಯಕ್ಷೆ ಕಾಂತಿಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ವಿವೇಕಾನಂದ ಶೆಣೈ, ಹಿಂದುಳಿದ ವರ್ಗದ ಅದ್ಯಕ್ಷ ಕುಶ ಮೂಲ್ಯ, ತಾಪ ಮಾಜಿ ಸುಧಾಕರ ಶೆಟ್ಪಿ, ಪುರ ಸಭಾ ಸದಸ್ಯರಾದ ವಿನ್ನಿ ಬೋಲ್ಡ್, ಹರೀಶ್ ಕುಮಾರ್, ಪ್ರತಿಮಾ, ರೆಹಮತ್, ಪ್ರಭಾ, ಐಟಿ ಸತೀಸ,ಮಾಜಿ ಪುರಸಭಾ ಸದಸ್ಯ ನವೀನ್ ದೇವಾಡಿಗ, ಸುನೀಲ್ ಕೊಟ್ಯಾನ್, ಶಿವಾಜಿ ರಾವ್, ರಾಜೇಶ ದೇವಾಡಿಗ, ಹಾಗೂ ಸತೀಶ್ ರಾವ್, ಶೋಭಾ, ಸುಮತಿ, ಪದ್ಮಿನಿ ಪೈ, ವಿಘ್ನೇಶ್ ಕಿಣಿ, ಸುಶಾಂತ್ ಉಪಸ್ಥಿತರಿದ್ದರು.