ಉಳ್ಳಾಲ, ಜು 28 (DaijiworldNews/PY): ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ವಾಚ್ಮೆನ್ಗೆ ಹಲ್ಲೆ ನಡೆಸಿ ಕಟ್ಟಿ ಹಾಕಿ ದರೋಡೆ ನಡೆಸಿ ಬರುತ್ತಿದ್ದ ವೇಳೆ ಆರೋಪಿಗಳ ಕಾರನ್ನು ಅಡ್ಡಗಟ್ಟಿದ ಪೊಲೀಸರು 7.75 ಕೆಜಿ ಬೆಳ್ಳಿ ಸೇರಿದಂತೆ ಸುಮಾರು 14,35,500 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 26ರ ಸೋಮವಾರ ಬೆಳಗ್ಗೆ ಉಳ್ಳಾಲ ಉಪನಿರೀಕ್ಷಕ ಪ್ರದೀಪ್ ಟಿ. ಆರ್ ಹಾಗೂ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕೆ. ಸಿ ರೋಡ್ ಜಂಕ್ಷನ್ ಬಳಿ ಇದ್ದ ಸಂದರ್ಭ ಕೇರಳದ ಮಂಜೇಶ್ವರದಿಂದ ಕಾರಿನಲ್ಲಿ ಮಂಗಳೂರು ಕಡೆಗೆ ಯಾವುದೋ ಕೃತ್ಯ ನಡೆಸಿಕೊಂಡು ಬರುತ್ತಿದ್ದಾರೆ ಎನ್ನುವ ಮಾಹಿತಿಯಂತೆ ಬೆಳಗ್ಗೆ 4.45ರ ಸುಮಾರಿಗೆ ಬಂದ ಕಾರನ್ನು ತಡೆದು ಪರಿಶೀಲನೆ ನಡೆಸಲು ಯತ್ನಿಸಿದಾಗ ಕಾರಿನಲ್ಲಿದ್ದವರು ಮಾರಾಕಾಯುಧಗಳೊಂದಿಗೆ ಇಳಿದು ಎಸ್ಐ ಅವರ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು.
ಬಳಿಕ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ 7.75 ಕೆಜಿ ಬೆಳ್ಳಿ, 1,90.000 ರೂ. ನಗದು, 30 ಹರಳುಗಳು, ವಿವಿಧ ಕಂಪೆನಿಯ ವಾಚ್ಗಳು, ಡಿವಿಆರ್, ಕಬ್ಬಿಣದ ಕತ್ತರಿ, ಮೆಣಸಿನ ಹುಡಿ ಪ್ಯಾಕೆಟ್, ಸ್ಪ್ರೇ ಪೈಂಟ್ ಡಬ್ಬಿ, ಎಲೆಕ್ಟ್ರೋನಿಕ್ ತೂಕ ಮಾಪಕ, ಸೈರನ್ ಮೆಶಿನ್, ಗ್ಯಾಸ್ ಸಿಲಿಂಡರ್, ಕಬ್ಬಿಣದ ಕಟ್ಟರ್, ಕೆಎಲ್-43-ಬಿ-3041ನೇ ನಂಬರ್ ಪ್ಲೇಟ್, ಕಬ್ಬಿಣದ ರಾಡ್ಗಳು ಮಚ್ಚು ಹಾಗೂ ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ ಒಟ್ಟು 14,35,500 ರೂ. ಎಂದು ಅಂದಾಜಿಸಲಾಗಿದೆ.
ಕಾರಿನಲ್ಲಿ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫರಂಗಿಪೇಟೆಯ ಮೊಹಮ್ಮದ್ ಗೌಸ್, ಸುರತ್ಕಲ್ನ ಇಮ್ರಾನ್ ಹಾಗೂ ಇತರರು ಇದ್ದು, ಆರೋಪಿಗಳು ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ವಾಚ್ಮೆನ್ಗೆ ಹಲ್ಲೆ ನಡೆಸಿ ಕಟ್ಟಿ ಹಾಕಿ ದರೋಡೆ ನಡೆಸಿ ಬರುತ್ತಿದ್ದ ವೇಳೆ ಆರೋಪಿಗಳ ಕಾರನ್ನು ಅಡ್ಡಗಟ್ಟಿ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಆರೋಪಿಗಳು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಘಟನೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.