Karavali
ಕುಂದಾಪುರ: ಯುಜಿಡಿ ಸ್ಥಳ ಖರೀದಿಗೆ 95 ಲಕ್ಷ ದರ ನಿಗದಿ - ಸದಸ್ಯರ ಆಕ್ಷೇಪ
- Wed, Jul 28 2021 03:15:43 PM
-
ಕುಂದಾಪುರ, ಜು 28 (DaijiworldNews/PY): ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಹೊಳೆ ಪರಿಸರದಲ್ಲಿ ಖಾಸಗಿ ವ್ಯಕ್ತಿಯಿಂದ ಸ್ಥಳ ಖರೀದಿಗೆ ದರ ನಿಗದಿ ಪಡಿಸಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಭೂಮಿ ಖರೀದಿಸುವ ಸಂದರ್ಭ ಸದಸ್ಯರ ಗಮನಕ್ಕೆ ತರುವಂತೆ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುಜಿಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸ್ಥಳ ಖರೀದಿ ಮಾಡಿ ದರ ನಿಗದಿಪಡಿಸಿ ಪಾವತಿಸಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಯಿತು. ವಿಷಯ ಪ್ರಾಸ್ತಾವಿಸಿದ ಸದಸ್ಯ ಗಿರೀಶ್ ಜಿ.ಕೆ ಸರ್ಕಾರದ ದರ ಪಟ್ಟಿಗಿಂತ ಹೆಚ್ಚಿನ ಹಣವನ್ನು ಪಾವತಿಸಿರುವುದು ಇಲ್ಲಿ ಕಂಡು ಬರುತ್ತದೆ. ಸರ್ಕಾರಿ ಬೆಲೆಯ ನಾಲ್ಕು ಪಟ್ಟು ಅಂದರೆ 95 ಲಕ್ಷ ನೀಡಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು. ಸರ್ಕಾರದ ಹಣ ಪೋಲಾಗಬಾರದು. ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ತನಿಖೆ ಮಾಡದೆ ದರ ನಿಗದಿಗೊಳಿಸಿರುವುದು ಸರಿಯಲ್ಲ. ಈ ಬಗ್ಗೆ ಸ್ಪಷ್ಟ ಉತ್ತರ ಬೇಕು ಇಲ್ಲದಿದ್ದರೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡುವುದಾಗಿ ಹೇಳಿದರು.
ಇದಕ್ಕೆ ಚಂದ್ರಶೇಖರ್ ಖಾರ್ವಿ ಧ್ವನಿಗೂಡಿಸಿದರು. ದರ ನಿಗದಿಪಡಿಸುವಾಗ ತೆಗೆದುಕೊಂಡ ಮಾನದಂಡ, ಹೊಳೆಯ ಹತ್ತಿರದ ಜಾಗಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸಿರುವುದಕ್ಕೆ ಸದಸ್ಯರ ಆಕ್ಷೇಪವಿದೆ. ಸದಸ್ಯರ ಆಕ್ಷೇಪವನ್ನು ಸಲ್ಲಿಸುವಂತೆ ಆಗ್ರಹಿಸಲಾಯಿತು. ಈ ಜಾಗಕ್ಕೆ ಹೋಗಲು ಸರಿಯಾದ ದಾರಿ ಇಲ್ಲ ಎಂದು ಆಕ್ಷೇಪಿಸಿದ ಬಳಿಕವೂ ಜಾಗ ಖರೀದಿ ಮಾಡಲಾಗಿದೆ ಎಂದು ಕೆ.ಜಿ ನಿತ್ಯಾನಂದ ದೂರಿದರು. ನಾಮ ನಿರ್ದೇಶಿತ ಸದಸ್ಯ ದಿವಾಕರ ಕಡ್ಗಿಮನೆ 12 ವರ್ಷಗಳ ಹಿಂದೆಯೇ ಇಲ್ಲಿ ಶಿವರಾಮ ಕಾರಂತ ರಸ್ತೆ ಎಂದು ನಾಮಕಾರಣ ಮಾಡಲಾಗಿದ್ದು ರಸ್ತೆಯೇ ಇಲ್ಲ ಎನ್ನುವುದು ಸರಿಯಲ್ಲ ಎಂದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದರ ನಿರ್ಣಯಿಸಿದ ನಂತರವೇ ಜಾಗ ಖರೀದಿಸಲಾಗಿದೆ. ತಹಶೀಲ್ದಾರ್, ಎಸಿ, ಎಡಿಸಿ ಅವರ ಅನುಮೋದನೆ ದೊರಕಿದ ನಂತರವೇ ತೀರ್ಮಾನ ತಗೆದುಕೊಳ್ಳಲಾಗುತ್ತಿದೆ. ಈ ವಿಚಾರ ಸಭೆಯ ಗಮನಕ್ಕೂ ತರಲಾಗಿತ್ತು ಎಂದ ಅವರು ಸದಸ್ಯ ಆಕ್ಷೇಪಣೆ ಗಮನಿಸಿದರೆ ಮುಂದಿನ ಭೂಮಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸುವ ನಿರ್ಣಯ ಮಾಡೋಣ ಎಂದಾಗ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ನಮ್ಮ ಆಕ್ಷೇಪ ಈಗ ಭೂಮಿ ಖರೀದಿಯ ವಿಚಾರದಲ್ಲಿ ಪಾವತಿಸಲಾದ ಮೊತ್ತದ ಬಗ್ಗೆ, ಸರ್ಕಾರಿ ದರಕ್ಕಿಂತ ಹೆಚ್ಚಿನ ಮೊತ್ತದ ಬಗ್ಗೆ ಹಾಗಂತ ಮುಂದೆ ಭೂಮಿ ಖರೀದಿಸಬಾರದೆಂದು ಅಲ್ಲ, ಎಂದು ಸದಸ್ಯರು ಹೇಳಿದರು.
ಹಿರಿಯ ಸದಸ್ಯ ಮೋಹನದಾಸ ಶೆಣೈ ಮಾತನಾಡಿ, ಸದಸ್ಯರ ಆಗ್ರಹ ಸೀಮಿತ ವಿಷಯಕ್ಕೆ ಸಂಬಂಧಿಸಿದಾಗಿದೆ. ಅಭಿವೃದ್ದಿಗೆ ಖಾಸಗಿ ಸ್ಥಳ ಖರೀದಿಗೆ ಆಕ್ಷೇಪವಲ್ಲ, ಖರೀದಿಸುವ ಭೂಮಿಯ ಮೌಲ್ಯದ ವಿಚಾರವನ್ನು ಸದಸ್ಯರ ಗಮನಕ್ಕೆ ತನ್ನಿ ಎಂದರು.
ಮಳೆಗಾಲದ ಸಿದ್ಧತೆ ಕಾಮಗಾರಿ ಸರಿಯಾಗಿ ನಡೆದಿಲ್ಲ ತೋಡಿನಲ್ಲಿ ನೀರು. ನಿಂತು ಕಾಯಿಲೆಗಳು ಹರಡುತ್ತಿವೆ. ಈಗಾಗಲೇ ಒಂದು ಮಲೇರಿಯಾ ಪ್ರಕರಣ ಪುರಸಭಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಎಚ್ಚರಿಕೆ ಕ್ರಮ ಕೈಗೊಂಡಿದ್ದಿರಾ? ಎಂದು ಶ್ರೀಧರ ಶೇರೆಗಾರ್ ಪ್ರಶ್ನಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಸಾಕಷ್ಟಿದೆ. ಸಿಬ್ಬಂದಿಗಳ ಕೊರತೆಯಿದೆ. ವಿದ್ಯುತ್ ಸಮಸ್ಯೆ ಕುರಿತು ಆಕ್ಷೇಪಿಸಿದಾಗಲೆಲ್ಲಾ ಕೋಡಿಯಲ್ಲಿದ್ದೇವೆ ಎಂದು ಗುತ್ತಿಗೆದಾರರು ಹೇಳುತ್ತಾರೆ. ಬೇರೆ ಕಡೆಯ ದಾರಿದೀಪ ಸರಿಪಡಿಸಲು ಸಮಯ ಇಲ್ಲವೇ ಎಂದು ಚಂದ್ರಶೇಖರ ಖಾರ್ವಿ ಕೇಳಿದಾಗ ಕಮಲಾ ಮಂಜುನಾಥ್, ಲಕ್ಷ್ಮೀಬಾಯಿ ಆಕ್ಷೇಪಿಸಿದರು. ಎಲ್ಲ ವಾರ್ಡ್ನ ದಾರಿದೀಪ, ಪರಿಶೀಲಿಸಿ ಸರಿಪಡಿಸಲು ಮೋಹನದಾಸ ಶೆಣೈ ತಿಳಿಸಿದರು. ಕೋಡಿಗೆ ಪ್ರತ್ಯೇಕ ವ್ಯವಸ್ಥೆಗೆ ಸೂಚಿಸಲಾಗಿತ್ತು. ಕಾಮಗಾರಿ ಆಗಿಲ್ಲ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ಹೇಳಿದರು.
ಮೆಸ್ಕಾಂನಲ್ಲಿ ಹಣ ಇಲ್ಲ ಎಂದು ಕಾಮಗಾರಿಗೆ ನಿರಾಕರಿಸಲಾಗುತ್ತಿದೆ. ಎಂದು ಅಶ್ವಕ್ ಹೇಳಿದರು. ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಸ್ಎಫ್ಸಿ ಅನುದಾನದಲ್ಲಿ ಕಡಿತ ಆಗುತ್ತಿದೆ. ಪುರಸಭೆಗೆ ವಿಶೇಷ ಅನುದಾನ ತರಿಸುವ ಪ್ರಯತ್ನಮಾಡಿ ಎಂದು ಚಂದ್ರಶೇಖರ ಖಾರ್ವಿ ಅಧ್ಯಕ್ಷರನ್ನು ಒತ್ತಾಯಿಸಿದರು. ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಬಾರದು ಎಂದು ಸಂತೋಷ್ ಶೆಟ್ಟಿ ಹೇಳಿದರು.
ಸರ್ಕಾರದಿಂದ ನೂತನವಾಗಿ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಪುಷ್ಪ ಶೇಟ್, ದಿವಾಕರ ಕಡ್ಗಿಮನೆ ರತ್ತಾಕರ ಚರ್ಚ್ರೋಡ್, ಪ್ರಕಾಶ್ ಖಾರ್ವಿ, ನಾಗರಾಜ ಕಾಂಚನ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಸೋರುತ್ತಿರುವ ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟಿನ್ ನಿರ್ಮಾಣವಾಗಿ ಮೂರು ವರ್ಷದೊಳಗೆ ಸೋರುತ್ತಿದೆ ಎಂದರೆ ಕಾಮಗಾರಿಯ ಬಗ್ಗೆ ಅನುಮಾನ ಬರುತ್ತಿದೆ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಇದರ ಸರಿಪಡಿಸುವುದಕ್ಕೆ ಅಂದಾಜು ಮೊತ್ತವೆಷ್ಟು, ಮುಂದಿನ ಕ್ರಮ ಏನು? ಎಂದು ಮೋಹನದಾಸ ಶೆಣೈ ಪ್ರಶ್ನಿಸಿದರು. ಪುರಸಭೆ ಎದುರುಗಡೆ ಇರುವ ಕಟ್ಟಡವೂ ಸೋರುತ್ತಿದೆ. ಕಟ್ಟಡ ತಳ ಮಹಡಿಯಲ್ಲಿ ಜನವರಿ ತನಕ ನೀರು ನಿಲ್ಲುತ್ತದೆ. ಎನ್ನುವ ಪ್ರಶ್ನೆಗೆ ಮೇಲ್ಬಾಗದಲ್ಲಿ ಮೇಲ್ಛಾವಣಿ ನಿರ್ಮಾಣ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.ದೊಡ್ಡ ದೊಡ್ಡ ಕಟ್ಟಡಗಳು ವೈಫಲ್ಯವಾಗಲು, ಇಲ್ಲಿಗೆ ಅದು ಸರಿಯಾಗದೇ ಇರಲು ಬೆಂಗಳೂರಿನಲ್ಲಿ ನೀಲನಕಾಶೆ ತಯಾರಾಗುವುದು. ಪುರಸಭೆ ಕಟ್ಟಡ, ಎದುರುಗಡೆಯ ಕಟ್ಟಡ ಎಲ್ಲವೂ ಕೂಡಾ ಬೆಂಗಳೂರಿನಲ್ಲಿಯೇ ಪ್ಲ್ಯಾನ್ ಸಿದ್ಧವಾಗಿರುವುದು. ಅದು ಇಲ್ಲಿಗೆ ಸರಿಯಾಗುತ್ತಿಲ್ಲ, ಇಲ್ಲಿಯೇ ಪ್ಲ್ಯಾನ್ ಸಿದ್ದಪಡಿಸಬೇಕು ಎಂದು ಮೋಹನದಾಸ ಶೆಣೈ ಹೇಳಿದರು.