ಕುಂದಾಪುರ, ಜು 28 (DaijiworldNews/MS): ಕುಂದಾಪುರದ ವಿನಾಯಕದಿಂದ ಕೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಶಿಥಿಲಗೊಂಡ ಸೇತುವೆಗಳನ್ನು ತೆಗೆದು ಹೊಸ ಸೇತುವೆಗಳ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದ ಒಳಗೆ ಮುಗಿಯಬೇಕಾದ ಕಾಮಗಾರಿ ಮುಗಿಯದ ಕಾರಣ ಸಾರ್ವಜನಿಕ ಸಂಪರ್ಕಕ್ಕೆ ಮೋರಿ ಅಳವಡಿಸಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದು ಅದು ಜು.21ರಂದು ಸುರಿದ ಬಾರೀ ಮಳೆ, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಕೋಡಿ ಸಂಪರ್ಕ ಈಗ ಸಂಪೂರ್ಣ ಈ ರಸ್ತೆಯಲ್ಲಿ ಸ್ಥಗಿತವಾಗಿದೆ.
ಈಗ ಕೋಡಿಗೆ ಹೋಗಬೇಕಾದ ಜನರು ಕೋಟೇಶ್ವರದ ಮೂಲಕ ಅಥವಾ ಕುಂದಾಪುರ ಚಿಕ್ಕನ್ ಸಾಲ್ ರಸ್ತೆಯ ಮೂಲಕ 7-8 ಕಿ.ಮೀ ಸುತ್ತುಗಟ್ಟಿ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಕುಂದಾಪುರ - ಕೋಡಿ ಸಂಪರ್ಕ ಕಲ್ಪಿಸುವ ಎರಡು ಹಳೆಯ ಸೇತುವೆಗಳು ಸಂಪೂರ್ಣ ನುಜ್ಜುಗೊಜ್ಜಾಗಿರುವುದರಿಂದ ಹೊಸ ಸೇತುವೆಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ 2 ಕೋಟಿ ರೂಪಾಯಿ ಅನುದಾನ ಮಂಜುರಾಗಿತ್ತು. ಕಾಮಗಾರಿ ಗುತ್ತಿಗೆಯೂ ಆಗಿ ಈಗ ಒಂದು ಸೇತುವೆ ಸ್ಲಾಬ್ ಆಗಿದೆ. ವಿನಾಯಕ ರಸ್ತೆಯಲ್ಲಿ ಸಿಗುವ ಮೊದಲ ಸೇತುವೆ ಇನ್ನೂ ಪಿಲ್ಲರ್ ಹಂತದಲ್ಲಿಯೇ ಇದೆ. ಇನ್ನೂ ಮೂರು ಫಿಲ್ಲರ್ ಕೂಡಾ ಆಗಬೇಕಿದೆ. ಮಳೆಗಾಲದ ಮೊದಲೇ ಸ್ಲ್ಯಾಬ್ ಹಾಕುವ ಕೆಲಸವಾದರೂ ಆಗಬೇಕಿತ್ತು ಎಂದು ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಇನ್ನೂ ಫಿಲ್ಲರ್ ಹಂತದಲ್ಲಿಯೇ ಇರುವುದರಿಂದ ತಾತ್ಕಾಲಿಕವಾಗಿ ನದಿ ದಾಟಲು ಮೋರಿ ಅಳವಡಿಸಿ, ಮಣ್ಣು ತುಂಬಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ಅವೈಜ್ಞಾನಿಕ ಎಂದು ಸ್ಥಳೀಯ ರೈತರು ಮೊದಲೆ ಆಗ್ರಹಿಸಿದ್ದರು. ಹರಿಯುವ ನೀರಿಗೆ ತಡೆ ಒಡ್ಡಿದರೆ ಕೃಷಿ ಭೂಮಿಗೆ ನೀರು ನುಗ್ಗುತ್ತದೆ, ವೇಗವಾಗಿ ಕೆಲಸ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದರು.
ಈಗ ತಾತ್ಕಾಲಿಕ ಸಂಪರ್ಕವೂ ಕೊಚ್ಚಿಕೊಂಡು ಹೋಗಿದೆ. ನೀರು ಇಳಿತ ಇರುವ ಸಂದರ್ಭದಲ್ಲಿ ಜನ ಕಷ್ಟಪಟ್ಟು ನದಿಯಲ್ಲಿ ಇಳಿದು ಆಚೆ-ಇಚೆ ಬರುತ್ತಾರೆ. ಆದರೆ ಇದು ಅಪಾಯಕಾರಿ. ತುಸು ಕಾಲು ಜಾರಿದರೂ ಅಪಾಯ ಸಂಭವಿಸಬಹುದು. ಕೆಸರು ಹೇರಳವಾಗಿರುವ ಪ್ರದೇಶ. ಎಚ್ಚರಿಕೆ ವಹಿಸುವುದು ತೀರಾ ಅಗತ್ಯ.
ಈ ಬಗ್ಗೆ ಸಂಬಂಧಪಟ್ಟವರಲ್ಲಿ ಕೇಳಿದರೆ ಕೂಡಲೇ ಕೆಲಸ ಆರಂಭವಾಗುತ್ತದೆ. ಆಗಸ್ಟ್ 15ರೊಳಗೆ ಕಾಮಗಾರಿ ಆರಂಭವಾಗುತ್ತದೆ ಎನ್ನುತ್ತಾರೆ.
“ಇಲ್ಲಿ ಎರಡು ಸೇತುವೆಗಳಿಗೆ ಒಟ್ಟು 2 ಕೋಟಿ ಅನುದಾನ ಮಂಜೂರಾಗಿದೆ. ಕೂಡಲೇ ಕೆಲಸ ಆರಂಭಿಸಲು ಒತ್ತಾಯಿಸಿದ್ದೇವೆ. ಆಗಸ್ಟ್ 15ರೊಳಗೆ ಕೆಲಸ ಆರಂಭಿಸಿ, ಸೆಪ್ಟೆಂಬರ್ ಅಂತ್ಯದೊಳಗೆ ಕೆಲಸ ಮುಕ್ತಾಯವಾಗುತ್ತದೆ -ಮಂಜು ಬಿಲ್ಲವ ಸ್ಥಳೀಯ ಮುಖಂಡರು.