ಉಡುಪಿ, ಜು 28 (DaijiworldNews/MS): ಇತ್ತೀಚಿಗೆ ಸುರಿದ ಭಾರಿ ಮಳೆಯ ಪರಿಣಾಮದಿಂದ ಉಡುಪಿಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯೂ ಹೊಂಡಮಯವಾಗಿದ್ದು ಸಂಚಾರ ಮಾಡಲು ವಾಹನ ಚಾಲಕರು ದಿನನಿತ್ಯ ಪಾಡು ಪಡುವಂತಾಗಿದೆ.
ಉಡುಪಿಯಿಂದ ಕುಂದಾಪುರ ದೆಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿನ ರಸ್ತೆಯು ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ಆಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಭಾಗದಲ್ಲಿ ಇರುವ ಸೇತುವೆಗಳಲ್ಲಿ ಕೂಡಾ ಇದೇ ಪರಿಸ್ಥಿತಿ ಇದೆ. ಪ್ರತಿನಿತ್ಯ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ದ್ವಿಚಕ್ರ, ಕಾರ್ ಸೇರಿದಂತೆ ಘನ ವಾಹನಗಳು ಕೂಡಾ ಸಂಚರಿಸುತ್ತಿವೆ. ನೂತನವಾಗಿ ಚತುಷ್ಪಥ ಗೊಂಡ ಹೆದ್ದಾರಿ ಇದಾಗಿದ್ದು ನಿರ್ಮಾಣ ಗೊಂಡ ಕೆಲವೇ ವರ್ಷಗಳಲ್ಲಿ ಹೊಂಡ ಗುಂಡಿಗಳನ್ನು ಕಾಣಲಾರಂಭಿಸಿದೆ.
ಸದ್ಯ ರಸ್ತೆಯನ್ನು ನವಯುಗ ಇಂಜಿನಿಯರಿಂಗ್ ಕಂಪನಿ ನಿರ್ವಹಣೆ ಮಾಡುತಿದ್ದು ನಿಗದಿತ ಸಮಯ ಮೀರಿದರೂ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ, ಹೊಂಡ ಗುಂಡಿಯ ಸಮಸ್ಯೆಯಿಂದಾಗಿ ಈಗಗಾಲೇ ಹಲವಾರು ಸಣ್ಣಪುಟ್ಟ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿವೆ. ನೂರಾರು ಮಂದಿ ದ್ವಿಚಕ್ರ ವಾಹನ ಪ್ರಯಾಣಿಕರು ಈ ಹೆದ್ದಾರಿಯಲ್ಲಿ ನಿತ್ಯ ಸಂಚಾರ ನಡೆಸುತ್ತಾರೆ. ಘನ ವಾಹನಗಳ ನಡುವೆ ಸಂಚಾರ ನಡೆಸುವಾಗ ಎದುರಾಗುವ ಹೊಂಡ ಗುಂಡಿಗಳಿಂದಾಗಿ ವಾಹನ ಸವಾರರು ಪ್ರಾಣಭಯವನ್ನು ಎದುರಿಸುವಂತಾಗಿದೆ.
ಕಲ್ಯಾಣಪುರ ಸೇತುವೆಯ ಹಲವು ಕಡೆಗಳಲ್ಲಿ ಕಾಂಕ್ರಿಟ್ ಕಿತ್ತ ಬಂದಿದ್ದು ಕೆಲವೆಡೆಗಳಲ್ಲಿ ಕಬ್ಬಿಣದ ಸರಳುಗಳು ಮೇಲೆದ್ದು ಬಂದಿವೆ. ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಮಳೆನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಣಿರು ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ಇದೆ.
ವಾಹನ ಸವಾರರು, ಬೈಕ್ ಸವಾರರು ಸ್ವಲ್ಪ ಆಯ ತಪ್ಪಿದರು ಅಪಘಾತ ಸಂಭವಿಸುವುದು ಖಂಡಿತ. ವಾಹನ ಸವಾರರು ಮತ್ತು ಬೈಕ್ ಸವಾರರು ಜಾಗೃತಿಯಿಂದ ವಾಹನವನ್ನು ಓಡಿಸಬೇಕು ಮಾತ್ರವಲ್ಲದೆ ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸರಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.