ಉಡುಪಿ, ಜು.27 (DaijiworldNews/HR): ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಅಧೀನದಲ್ಲಿರುವ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆ, ಯುವ ಮತ್ತು ಆರೋಗ್ಯ ಆಯೋಗದ ಸಹಭಾಗಿತ್ವದಲ್ಲಿ ದೇವಾಲಯದ ವ್ಯಾಪ್ತಿಯ ಹಿರಿಯರ ದಿನ ಆಚರಣೆ ಮಾಡಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಉದ್ಯಾವರ ದೇವಾಲಯದ ಪ್ರಧಾನ ಧರ್ಮಗುರು ಫಾ. ಸ್ಟ್ಯಾನಿ ಬಿ ಲೋಬೊ ಮತ್ತು ಫಾ. ಝೇವಿಯರ್ ಪಿಂಟೊ ನೇತೃತ್ವದಲ್ಲಿ ಕೃತಜ್ಞತಾ ಬಲಿಪೂಜೆ ನಡೆಯಿತು. ಬಳಿಕ ಚರ್ಚ್ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ದಾಂಪತ್ಯ ಜೀವನದಲ್ಲಿ ಐವತ್ತಕ್ಕೂ ಅಧಿಕ ವರ್ಷದ ಸಂಭ್ರಮದಲ್ಲಿರುವ ಹಿರಿಯ ಜೋಡಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಾಹೆ ಮಣಿಪಾಲದ ಸ್ಟೂಡೆಂಟ್ ಕೌನ್ಸಿಲರ್ ಡಾ. ರಾಯನ್ ಮಿನೇಜಸ್ ಮಾತನಾಡಿ," ಪ್ರಸ್ತುತ ಕಾಲದಲ್ಲಿ ಯುವಜನರಿಗಿಂತ ಹೆಚ್ಚು ಸಮಸ್ಯೆ ಇರೋದು ಹಿರಿಯರಿಗೆ. ಹಿಂದಿನ ಕಾಲದಲ್ಲಿ ಮನೆ ತುಂಬಾ ಜನರಿದ್ದರು. ಆದರೆ ಪರಿಸ್ಥಿತಿ ಬದಲಾಗಿದೆ. ಹಲವು ಮನೆಗಳಲ್ಲಿ ಏಕಾಂಗಿ ಜೀವನ ನಡೆಸುವವರೆ ಹೆಚ್ಚು. ಇದರಿಂದಾಗಿ ಮಾನಸಿಕ ಸಂತುಲನ, ಒತ್ತಡ, ಮನಸ್ಸಿಗೆ ಏಕಾಗ್ರತೆ ಇಲ್ಲದೆ ಇರುವುದರಿಂದ ಸಮಸ್ಯೆಗಳು ಹೆಚ್ಚಾಗಿವೆ. ಉದ್ಯೋಗ ನಿಮಿತ್ತ ದೂರ ದೂರದ ಊರಿನಲ್ಲಿರುವ ಮಕ್ಕಳು ತಮ್ಮ ತಂದೆ ತಾಯಿಯರಿಗೆ ಒಳ್ಳೆಯ ಮೊಬೈಲ್ ಕೊಡುತ್ತಾರೆ. ಆದರೆ ದೊಡ್ಡ ದೊಡ್ಡ ಮೊಬೈಲ್ ಗಳ ಉಪಯೋಗ ಗೊತ್ತಿಲ್ಲದ ಹಿರಿಯರು ಸೈಬರ್ ಕ್ರೈಮ್ ಗೆ ಬಲಿಯಾಗುತ್ತಿದ್ದಾರೆ. ಇದು ನೋವಿನ ವಿಚಾರ. ಇದರಿಂದಾಗಿ ಹಿರಿಯರ ಮಾನಸಿಕ ಸಂತುಲನ ತಪ್ಪುತ್ತಿದೆ. ಜಿಲ್ಲೆಯಲ್ಲಿ ಅನಾಥಾಶ್ರಮಗಳು ಹೆಚ್ಚುತ್ತಿವೆ. ಮಾತ್ರವಲ್ಲದೆ ಇದ್ದ ಅನಾಥಾಶ್ರಮಗಳು ಹಿರಿಯರಿಂದ ತುಂಬುತ್ತಿದೆ. ಇದನ್ನು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ" ಎಂದರು.
ಅಧ್ಯಕ್ಷತೆ ವಹಿಸಿದ್ದ ವಂ. ಫಾ. ಸ್ಟ್ಯಾನಿ ಬಿ ಲೋಬೊ ಹಿರಿಯರ ದಿನದ ಸಂದೇಶವನ್ನು ನೀಡಿದರು. ವೇದಿಕೆಯಲ್ಲಿ ವಂ. ಫಾ. ಝೇವಿಯರ್ ಪಿಂಟೋ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಕಾರ್ಯದರ್ಶಿ ಮೈಕಲ್ ಡಿಸೋಜ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಹಿರಿಯರಾದ ಜೋಸೆಫ್ ಮತ್ತು ಗ್ರೇಸಿ ಕರ್ಡೋಜಾ, ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಸ್ತ್ರೀ ಸಂಘಟನೆಯ ಕಾರ್ಯದರ್ಶಿ ಐರಿನ್ ಪಿರೇರಾ, ಯುವ ಆಯೋಗದ ಸಂಚಾಲಕ ರೋಯ್ಸ್ ಫೆರ್ನಾಂಡಿಸ್, ಕಥೋಲಿಕ್ ಸಭಾ ಮಾಜಿ ಅಧ್ಯಕ್ಷ ಲೋರೆನ್ಸ್ ಡೇಸಾ ಉಪಸ್ಥಿತರಿದ್ದರು.