ಮಂಜೇಶ್ವರ, ಜು 27 (DaijiworldNews/MS): ಹೊಸಂಗಡಿಯ ರಾಜಧಾನಿ ಜುವೆಲ್ಲರಿ ಯಲ್ಲಿ ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ತಂಡಕ್ಕೆ ಮಹತ್ವದ ಸುಳಿವು ಲಭಿಸಿದ್ದು, ದರೋಡೆಕೋರರು ಬಂದಿದ್ದ ಇನ್ನೋವಾ ಕಾರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಪತ್ತೆ ಹಚ್ಚಲಾಗಿದ್ದು, ಕಾರಿನಿಂದ ಏಳೂವರೆ ಕಿಲೋ ಬೆಳ್ಳಿಯ ಆಭರಣ ಮತ್ತು ಒಂದೂವರೆ ಲಕ್ಷ ರೂ. ಲಭಿಸಿದೆ. ಉಳ್ಳಾಲ ಪೊಲೀಸರು ಕಾರು, ಬೆಳ್ಳಿಯ ಆಭರಣ ಮತ್ತು ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉಳಿದ ಆಭರಣ ಮತ್ತು ನಗದನ್ನು ಇನ್ನೊಂದು ಕಾರಿನಲ್ಲಿ ಕೊಂಡೊಯ್ದಿರಬಹುದು ಎಂದು ಶಂಕಿಸಲಾಗಿದೆ. ಇನ್ನೋವಾ ಕಾರು ಸುರತ್ಕಲ್ ನಿಂದ ಬಾಡಿಗೆಗೆ ಪಡೆದಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಸೋಮವಾರ ಮುಂಜಾನೆ ದರೋಡೆ ನಡೆದಿತ್ತು. ಮುಂಜಾನೆ 2 ಗಂಟೆ ಸುಮಾರಿಗೆ ಬಂದ ದರೋಡೆಕೋರರು ಕಾವಲುಗಾರನನ್ನು ಥಳಿಸಿ ಕಟ್ಟಿ ಹಾಕಿದ ಮೇಲೆ 15 ಕಿಲೋ ಬೆಳ್ಳಿಯ ಆಭರಣ ಹಾಗೂ ನಾಲ್ಕೂವರೆ ಲಕ್ಷ ರೂ. ದರೋಡೆ ಮಾಡಿದ್ದರು. ಗಾಯಗೊಂಡಿರುವ ಕಾವಲುಗಾರ ಅಬ್ದುಲ್ಲ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.