ಮಂಗಳೂರು, ಜು 27 (DaijiworldNews/MS): ಶ್ರೀಲಂಕಾದ 38 ಪ್ರಜೆಗಳ ಅಕ್ರಮ ಪ್ರವೇಶ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಕೈಗೆತ್ತಿಕೊಂಡಿದ್ದು ಇದಕ್ಕೆ ಈ ಅಕ್ರಮ ನುಸುಳುಕೋರರು ಎಲ್ ಟಿಟಿ ಈ ಪ್ರಭಾವ ಹೊಂದಿರಬಹುದಾದ ಶಂಕೆಯೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಬಂಧಿತರೆಲ್ಲರೂ ಶ್ರೀಲಂಕಾದ ತಮಿಳರು ಇವರಲ್ಲಿ ಸಿಂಹಳೀಯರು ಯಾರು ಇಲ್ಲ, ಇವರು ಎಲ್ ಟಿ ಟಿ ಇ ಯ ಪ್ರಭಾವ ಇದ್ದ ಉತ್ತರ ಶ್ರೀಲಂಕಾದ ಪ್ರದೇಶದಲ್ಲಿದ್ದವರು. ಹಾಗಾಗಿ ರಾಷ್ಟ್ರೀಯ ಭದ್ರತೆಯ ಹಿನ್ನಲೆಯಲ್ಲಿ ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆನಡಾದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಏಜೆಂಟರು ಈ 38 ಮಂದಿಯನ್ನು ಕರೆತಂದಿದ್ದರು.
ಘಟನೆ ಹಿನ್ನಲೆ:
ಮೂವತ್ತೆಂಟು ಶ್ರೀಲಂಕಾದ ಪ್ರಜೆಗಳು ಶ್ರೀಲಂಕಾದಿಂದ ಅಕ್ರಮವಾಗಿ ತಮಿಳುನಾಡಿಗೆ ಪ್ರವೇಶಿಸಿ ಮೇ ತಿಂಗಳ ಸುಮಾರಿಗೆ ಮಂಗಳೂರು ತಲುಪಿದ್ದರು. ಸುಮಾರು ಒಂದೂವರೆ ತಿಂಗಳಿನಿಂದ ಎರಡು ಲಾಡ್ಜ್ಗಳಲ್ಲಿ ಮತ್ತು ಎರಡು ಮನೆಗಳಲ್ಲಿ ತಂಗಿದ್ದರು, ಅಲ್ಲದೆ ಇವರು ಸ್ಥಳೀಯವಾಗಿ ತಮ್ಮನ್ನು ದೈನಂದಿನ ಕೂಲಿ ಕಾರ್ಮಿಕರು, ತಮಿಳುನಾಡಿನ ಕಾರ್ಮಿಕರು ಮತ್ತು ಮೀನುಗಾರರೆಂದು ಹೇಳಿಕೊಳ್ಳುತ್ತಿದ್ದರು . ಮಾರ್ಚ್ 17 ರಂದು ಶ್ರೀಲಂಕಾದ ಏಜೆಂಟರಿಗೆ 6 ರಿಂದ 10 ಲಕ್ಷ ಶ್ರೀಲಂಕಾ ನಗದನ್ನು ಪಾವತಿಸಿ ಶ್ರೀಲಂಕಾದಿಂದ ಹೊರಟಿದ್ದು, ಎಜೆಂಟರ ಮೂಲಕ ಕೆನಡಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿದರು. ತೂತುಕುಡಿಯನ್ನು ತಲುಪಿದ ನಂತರ, ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು. ಆದರೆ ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಹೆಚ್ಚಿನ ತಪಾಸಣೆಯಿಂದಾಗಿ ಅವರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ತೆರಳಲು ಹೇಳಲಾಗಿತ್ತು. ತಮಿಳುನಾಡಿನಿಂದ ಅವರು ಖಾಸಗಿ ಬಸ್ಗಳಲ್ಲಿ ಬೆಂಗಳೂರಿಗೆ ಸಣ್ಣ ಗುಂಪುಗಳಲ್ಲಿ ಪ್ರಯಾಣಿಸಿದರು, ಅಲ್ಲಿ ಬೆಂಗಳೂರಿನ ಏಜೆಂಟರೂ ಇದ್ದರು. ಬೆಂಗಳೂರಿನಿಂದ ಅವರು ಮಂಗಳೂರು ತಲುಪಿ ನೆಲೆಸಿದ್ದರು ಎಂದು ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.