ಮಂಗಳೂರು, ಜು. 26 (DaijiworldNews/SM): ಮಲ್ಲೂರು ಗುಡ್ಡೆ ಝುಬೇರ್ ಮನೆ ಭಾಗಶಃ ಕುಸಿತ ಹಾಗೂ ಗುಡ್ಡ ಕುಸಿತ ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆ ಮಂದಿಗೆ ಸಾಂತ್ವನ ಹೇಳಿದರು.
ಇನ್ನು ಘಟನೆಯಲ್ಲಿ ಮನೆ ಭಾಗಶಃ ಹಾನಿಗೊಂಡಿರುವುದರಿಂದ ತಕ್ಷಣ ಮನೆ ನಿರ್ಮಿಸಲು ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಇದರ ಸಂಪೂರ್ಣ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಸುಮಾ ಅರುಣ್ ಶೆಟ್ಟಿಯವರಿಗೆ ವಹಿಸಿದರು. ಹಾಗೂ ಹೆಚ್ಚುವರಿಯಾಗಿ ತಹಶೀಲ್ದಾರ್ ಫಂಡ್ ನಿಂದ 95 ಸಾವಿರ ರೂಪಾಯಿ ಸ್ಥಳದಲ್ಲೇ ಘೋಷಣೆ ಮಾಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭೀಪಾತುಮ್ಮ ಅವರ ಸಂಪೂರ್ಣ ಚಿಕಿತ್ಸೆ ವೆಚ್ಚ ಪಾವತಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲಾ ಬೊಲ್ಲಂಕಿಣಿ, ಗ್ರಾಮ ಕರಣಿಕ ಮೆಹಬೂಬ್, ಸಾಮಾಜಿಕ ಕಾರ್ಯಕರ್ತ ಹನೀಫ್ ಮಲ್ಲೂರು, ಪತ್ರಕರ್ತ ಜಬ್ಬಾರ್ ಮಲ್ಲೂರು ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.