ಉಡುಪಿ,ಜು.26 (DaijiworldNews/HR): ಯಡಿಯೂರಪ್ಪ ಅವರು ಒತ್ತಡದಿಂದ ರಾಜೀನಾಮೆ ಕೊಟ್ಟದ್ದಲ್ಲ. ಪಕ್ಷದ ಸಿದ್ಧಾಂತವನ್ನು ಒಪ್ಪಿ ಸಂತೋಷದಿಂದ ರಾಜೀನಾಮೆ ಕೊಟ್ಟಿದ್ದಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪನವರಿಗೆ ಕಣ್ಣೀರು ಬಂದಿರುವುದು ಸ್ವಾಭಾವಿಕ. ಡಿಕೆಶಿ ಮತ್ತು ಸಿದ್ದರಾಮಯ್ಯ ಕಠೋರ ಮನಸ್ಸಿನವರು ಆ ಇಬ್ಬರಿಗೆ ಕಣ್ಣೀರು ಬರುವುದಿಲ್ಲ. ಭಾವನಾತ್ಮಕ ಜೀವಿಗಳಿಗೆ ಕಣ್ಣೀರು ಬರುತ್ತದೆ" ಎಂದರು.
"ಯಡಿಯೂರಪ್ಪ ಅವರು ಎರಡು ವರ್ಷ ಯಶಸ್ವಿ ಆಡಳಿತ ನಡೆಸಿದ್ದು, ರಾಜೀನಾಮೆ ನೀಡಿದ್ದು ಪಕ್ಷದ ಕಾರ್ಯಕರ್ತರರಲ್ಲರಿಗೆ ಬೇಸರದ ಸಂಗತಿ. ಆದರೆ ಪ್ರವಾಹ ಮತ್ತು ಕೊರೊನಾ ಸಂಕಷ್ಟವನ್ನು ಮೀರಿ ಉತ್ತಮ ಆಡಳಿತ ನಡೆಸಿದ್ದು, ಕರಾವಳಿ ಜಿಲ್ಲೆಗಳಿಗೆ ಯಡಿಯೂರಪ್ಪ ಬಹಳ ಸಹಕಾರ ನೀಡಿದ್ದಾರೆ" ಎಂದಿದ್ದಾರೆ.
ಇನ್ನು ಮುಂದಿನ ಸಿಎಂ ಆಯ್ಕೆ ವಿಚಾರ ಕುರಿತು ಮಾತನಾಡಿದ ಅವರು, "ಕರಾವಳಿ ಅಭಿವೃದ್ಧಿ ಮಾಡುವ ನಾಯಕ ರಾಜ್ಯಕ್ಕೆ ಬೇಕು. ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವವರು ಆಯ್ಕೆಯಾಗಬೇಕು. ಧೈರ್ಯದ ನಿರ್ಧಾರ ತೆಗೆದುಕೊಳ್ಳುವವರು ಸಿಎಂ ಆಗಬೇಕು. ಅಧಿಕಾರಿಗಳಲ್ಲಿ ಕೆಲಸ ಮಾಡಿಸುವ ಶಕ್ತಿಶಾಲಿ ನಾಯಕನ ಆಯ್ಕೆಯಾಗಬೇಕು" ಎಂದು ಹೇಳಿದ್ದಾರೆ.